ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕುಖ್ಯಾತ ರೌಡಿಯೊಬ್ಬನನ್ನು ಆಸ್ಪತ್ರೆಗೆ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿರುವ ಘಟನೆ ಮಲ್ಲತ್ತಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಪಾಪರೆಡ್ಡಿ ಪಾಳ್ಯ ಸಮೀಪದ ಈರಣ್ಣ ಪಾಳ್ಯನಿವಾಸಿ ಟಿ.ಸಿ ರಾಜ(35 ) ಮೃತಪಟ್ಟ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ರೌಡಿ, ಆಟೋದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ.ಈ ವೇಳೆ ಬೆನ್ನಟ್ಟಿದ ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ದಾಳಿ ವೇಳೆ ರಕ್ಷಣೆಗೆ ಧಾವಿಸಿದ ಸ್ನೇಹಿತ, ಆಟೋ ಚಾಲಕ ಸುರೇಶನ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಬೀಸಿದ್ದಾರೆ. ಕೊಲೆಯಾದ ರಾಜ ಕೆಲದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಚಿಕಿತ್ಸೆ ಪಡೆಯಲು ಗೆಳೆಯ ಸುರೇಶ್ ನ ಆಟೋದಲ್ಲಿ ಮಲ್ಲತ್ತಹಌಯಲ್ಲಿರುವ ಕ್ಲಿನಿಕ್ ಗೆ ಹೋಗಿದ್ದ. ಚಿಕಿತ್ಸೆ ಪಡೆದು ವಾಪಸ್ಸಾಗುತ್ತಿರಬೇಕಾದರೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿದ್ದಾರೆ. ರೌಡಿಯಾಗಿರುವ ರಾಜನಿಗೆ ಬೆದರಿಕೆ ಇದ್ದ ಕಾರಣ ಕಾರು ಅಡ್ಡ ನಿಲ್ಲುತ್ತಿದ್ದಂತೆಯೇ ಆಟೋದಿಂದ ಕೆಳಗಿಳಿದ ಸುರೇಶ, ಸ್ನೇಹಿತನ ರಕ್ಷಣೆಗೆ ಮುಂದಾಗಿದ್ದಾನೆ.ಮೊದಲು ಸುರೇಶನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬಳಿಕ ರಾಜನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆಗೊಳಗಾಗಿದ್ದರಿಂದ ತಲೆಭಾಗ ಕತ್ತರಿಸಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ರೌಡಿ ರಾಜ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡ ಸುರೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಡಾಬರ್ ಮೂರ್ತಿ ಅಥವಾ ರಾಮನ ಸಹಚರರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ರಾಜ,ಕುಖ್ಯಾತ ರೌಡಿ ಕೊರಂಗು ಕೃಷ್ಣ ನ ಜತೆ ಗುರುತಿಸಿಕೊಂಡಿದ್ದ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಡಕಾಯಿತಿ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ದಾಖಲಾಗಿದ್ದವು.
Advertisement