

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತರೇ ಇದ್ದಾರೆ.
ಅಷ್ಟೇ ಅಲ್ಲ ಅವರಲ್ಲಿ ಶೇ.60ರಷ್ಟು ಯುವಕರು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದು, ಇದಕ್ಕೆ ಕಾರಣ ಪತ್ತೆ ಹಚ್ಚಲು 'ಸಲಹಾ ಸಮಿತಿ' ರಚಿಸುವಂತೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕಿಷ್ ಬಾನು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ನಡೆದಿದ್ದ ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರಣಾಧೀನ ಕೈದಿಗಳನ್ನು ಸರ್ಕಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನಿಗಮವು ಜೈಲಿಗೆ ಭೇಟಿ ನೀಡಿದಾಗ ಶೇ.50ರಷ್ಟು ಅಲ್ಪಸಂಖ್ಯಾತರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಜೈಲು ಶಿಕ್ಷೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ.
4136 ವಿಚಾರಣಾಧೀನ ಕೈದಿಗಳಿದ್ದು ಅವರಲ್ಲಿ 2100 ಮಂದಿ ಅಲ್ಪಸಂಖ್ಯಾತರೇ(ದಲಿತ, ಮುಸ್ಲಿಂ, ಕ್ರೈಸ್ತ, ಬುದ್ಧ, ಜೈನ್) ಇದ್ದಾರೆ. ಈ ವರ್ಗದ ಯುವಕರು ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕಿದೆ. ಅದಕ್ಕಾಗಿ ಸಮಿತಿ ರಚಿಸುವ ಅಗತ್ಯವಿದೆ. ಸಮಿತಿ ರಚಿಸಿ ಅದರಿಂದ ಬಂದ ವರದಿ ಆಧರಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಲಾಗುವುದು ಎಂದರು.
ಕಾನೂನು ಘಟಕ ರಚಿಸಿ: ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ವೇಳೆ ವಿಚಾರಣಾಧೀನ ಕೈದಿಗಳು ಹಲವು ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ದಂಡ ಕಟ್ಟಿ ಬಿಡುಗಡೆ ಆಗಲು ಅರ್ಹತೆ ಇರುವವರು, ಜಾಮೀನು ಮೇಲೆ ಬಿಡುಗಡೆ ಆಗಲು ಅರ್ಹರಿದ್ದರೂ ವಕೀಲರು ಸಿಗದೆ ಸಾಕಷ್ಟು ಮಂದಿ ಜೈಲಿನಿಂದ ಹೊರಬರಲು ಆಗದೆ ತೊಂದರೆ ಎದುರಿಸುತ್ತಿದ್ದಾರೆ. ಅಂತಹವರ ಬಿಡುಗಡೆಗಾಗಿ ಸರ್ಕಾರವು `ಕಾನೂನು ಘಟಕ' ರಚಿಸುವ ಅಗತ್ಯವಿದೆ. ಈ ಮೂಲಕ ಹಣ ಅಥವಾ ವಕೀಲರ ನೆರವಿರುವ ಕೈದಿಗಳಿಗೆ ಸಹಾಯ ಮಾಡಬೇಕಿದೆ.
ಪರಪ್ಪನ ಅಗ್ರಹಾರ ಜೈಲೊಂದರಲ್ಲೇ ಅಷ್ಟೊಂದು ಮಂದಿ ಅಲ್ಪಸಂಖ್ಯಾತರು ಇರುವಾಗ ಜಿಲ್ಲೆ ಹಾಗೂ ತಾಲೂಕು ಜೈಲುಗಳಲ್ಲಿ ಎಷ್ಟು ಮಂದಿ ಅಲ್ಪ ಸಂಖ್ಯಾತರು ಈ ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ತಿಳಿಯಬೇಕಿದೆ ಹಾಗಾಗಿ ಸರ್ಕಾರ 'ಕಾನೂನು ಘಟಕ' ಹಾಗೂ 'ಸಲಹಾ ಸಮಿತಿ' ರಚಿಸಿದಲ್ಲಿ ಇಂತಹ ಕೈದಿಗಳಿಗೆ ನೆರವಾಗಬಹುದು ಎಂದರು.
Advertisement