ಅರಮನೆ ಮೈದಾನದಲ್ಲಿ ಬಡವರ ಮದುವೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಮದುವೆಗಳೆಂದರೆ ಅದ್ಧೂರಿಯ ಆಡುಂಬೊಲ ಎಂದೇ ಜನಜನಿತ. ಆದರೆ, ಬುಧವಾರ ಸಾಮೂಹಿಕ ...
ವಿವಾಹ
ವಿವಾಹ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಮದುವೆಗಳೆಂದರೆ ಅದ್ಧೂರಿಯ ಆಡುಂಬೊಲ ಎಂದೇ ಜನಜನಿತ. ಆದರೆ, ಬುಧವಾರ ಸಾಮೂಹಿಕ ವಿವಾಹವೊಂದು ನೆರವೇರಿತು. ಅದು ಕುವೆಂಪು ಆಶಯದ ಮಂತ್ರ ಮಾಂಗಲ್ಯದಂತೆ ವಿವಾಹ ನಡೆದಿದ್ದು ವಿಶೇಷ. ಅಲ್ಲದೇ ಸಾಮೂಹಿಕ ವಿವಾಹದಲ್ಲಿ ಕ್ರೈಸ್ತ ಸಮುದಾಯದ ಒಂದು ಜೋಡಿ ಇದ್ದರೆ, ಅಂಗವಿಕಲರೂ ಇದ್ದಿದ್ದು ಮತ್ತೊಂದು ವಿಶೇಷ. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದವರು ಸತಿಪತಿಗಳಾಗಿದ್ದು ಹೊಸ ಸಂಗತಿ. ಈ ಸಂಗತಿಯನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಮೆಲುಕು ಹಾಕಿ, ಕುವೆಂಪು ಅವರ ಮಂತ್ರಮಾಂಗಲ್ಯದ ಉದ್ದೇಶವನ್ನು ವಿವರಿಸಿದರು. ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸರಳ ವಿವಾಹವನ್ನು ಕಡ್ಡಾಯಗೊಳಿಸಲು ಸಮಾಜದ ಸಹಮತ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಒಬ್ಬರಿಗೊಬ್ಬರು ನೋಡಿ ಅದ್ಧೂರಿ ವಿವಾಹ ಮಾಡುವ ಪರಿಪಾಠ ಹೆಚ್ಚುತ್ತಿದೆ. ವಿವಾಹದ ನಂತರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಿ ಸರಳ ವಿವಾಹದ ಕಾನೂನು ಜಾರಿಗೆ ತರಲು ಮುಂದಾಗಿತ್ತು. ಆದರೆ, ಸಮಾಜದ ವಿರೋಧದಿಂದಾಗಿ ಕೈಬಿಡಬೇಕಾಯಿತು ಎಂದು ವಿಷಾದಿಸಿದರು. ಸಚಿವ ಡಿ.ಕೆ. ಶಿವಕುಮಾರ್, ಸರಳ ವಿವಾಹವೇ ಸರ್ಕಾರದ ನೀತಿ. ಇಂತಹ ವಿವಾಹ ಪದ್ಧತಿಗಳು ಎಲ್ಲೆಡೆ ಚರ್ಚೆಗೀಡಾಗಿವೆ.  ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು 49ನೇ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಅರಮನೆ ಮೈದಾನದಲ್ಲಿ ಸಾಮೂಹಿಕ ವಿವಾಹ, ಕ್ಯಾನ್ಸರ್ ಪೀಡಿತರಿಗೆ ಆರ್ಥಿಕ ಸಹಾಯಕ, ವಿದ್ಯಾರ್ಥಿ ವೇತನ, ಆರ್ಥಿಕ ತೊಂದರೆಯಿಂದ ಜೈಲಲ್ಲೇ ಉಳಿದಿರುವ ವೃದ್ಧ ಕೈದಿಗಳಿಗೆ ನೆರವು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಕ್ಯಾನ್ಸರ್ ಪೀಡಿತರ ಪರವಾಗಿ ಅವರ ಕುಟುಂಬದವರು ಆರ್ಥಿಕ ಸಹಾಯ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com