ಸುಳ್ಯ: ಆಪರೇಷನ್ ಮ್ಯಾನ್ಮಾರ್ನಲ್ಲಿ ಸುಳ್ಯ ತಾಲೂಕಿನ ಯೋಧರೊಬ್ಬರು ಇದ್ದರು ಎಂಬ ಮಾಹಿತಿ ತಿಳಿದುಬಂದಿದ್ದು, ಕರ್ನಾಟಕ ಹಾಗೂ ದೇಶದ ಕೀರ್ತಿ ಹೆಚ್ಚಾಗುವಲ್ಲಿ ಇವರ ಪಾತ್ರವೂ ಇದೆ.
ಸುಳ್ಯ ತಾಲೂಕಿನ ಮಂಡೆಕೋಲಿನ ಸುಬೇದಾರ್ ರಘುಪತಿ ಎಂಬುವರೇ ಮ್ಯಾನ್ಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯೋಧರಾಗಿದ್ದಾರೆ. ಭಾರತದ 18 ಮಂದಿ ಸೈನಿಕರನ್ನು ನಾಗಾ ಉಗ್ರರು ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಮೇಜರ್ ಅಜಿತ್ ಕತ್ರಿ ಹಾಗೂ ಲೆಫ್ಟಿನೆಂಟ್ ಕರ್ನಲ್ ನೆಕ್ಸರ್ ನೇತೃತ್ವದಲ್ಲಿ ತಲಾ 40 ಜನರಿದ್ದ ಎರಡು ತಂಡಗಳು ಉಗ್ರರ ಮೇಲೆ ದಾಳಿ ಮಾಡಿದ್ದವು.
ಒಂದು ತಂಡ ಹೆಲಿಕಾಪ್ಟರ್ನಲ್ಲಿ ಹಾಗೂ ಇನ್ನೊಂದು ತಂಡ ಭೂದಾಳಿ ನಡೆಸಿದೆ. 21ನೇ ಪ್ಯಾರಾ ಕಮಾಂಡೋ ಸ್ಪೆಶಲ್ ಫೋರ್ಸ್ನಲ್ಲಿ ಸುಬೇದಾರ್ ಆಗಿರುವ ಮಂಡೆಕೋಲಿನ ಉಗ್ರಾಣಿಮನೆಯ ರಘುಪತಿ ನೆಲದಲ್ಲಿಯೇ ಇದ್ದು, ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ನಮ್ಮ ದಾಂಪತ್ಯ ಜೀವನ 13ನೇ ವರ್ಷಕ್ಕೆ ಕಾಲಿಟ್ಟ ದಿನವೇ ಈ ಕಾರ್ಯಾಚರಣೆ ನಡೆದು ಜಯ ಸಾಧಿಸಿದ್ದು ತಮಗೆ ತೀವ್ರ ಸಂತಸ ತಂದಿದೆ ಎಂದು ಪತ್ನಿ ಭಾರತಿ ಸಂತಸ ವ್ಯಕ್ತಪಡಿಸಿದ್ದಾರೆ.
ರಘುಪತಿ ಅವರ ತಂದೆ ಜತ್ತಪ್ಪ ಗೌಡರಿಗೆ ನಾಲ್ಕು ಮಂದಿ ಮಕ್ಕಳು. ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು. ಹಿರಿಯ ಮಗ 47 ವರ್ಷ ಪ್ರಾಯದ ರವೀಂದ್ರ ಕೇಂದ್ರ
ಕೈಗಾರಿಕಾ ಭದ್ರತಾ ಪಡೆಯಲ್ಲಿ ಯೋಧರಾಗಿದ್ದು, ಎರಡನೇ ಮಗ 43ರ ಹರೆಯದ ರಘುಪತಿ ಭೂಸೇನೆಯಲ್ಲಿದ್ದಾರೆ. ಆರಂಭದಲ್ಲಿ ಬೆಳಗಾವಿಯಲ್ಲಿ ತರಬೇತಿ. ಬಳಿಕ ಮರಾಠಾ ರೆಜಿಮೆಂಟ್, ಆ ಬಳಿಕ ಬೆಂಗಳೂರಿನ ಪ್ಯಾರಾ ರೆಜಿಮೆಂಟಿನ ತರಬೇತಿ ಕೇಂದ್ರ, ಅಸ್ಸಾಂನ ಜರೋಟಿ ತಂಡದಲ್ಲಿ ಸುಬೇದಾರ್ ಆಗಿ ಬಡ್ತಿ ಪಡೆದಿದ್ದಾರೆ. 15 ವರ್ಷದ ಬಾಂಡ್ ಇದ್ದರೂ 25 ವರ್ಷಗಳಿಂದ ಸೇನೆಯಲ್ಲಿ ಸೇವೆಯಲ್ಲಿದ್ದಾರೆ. ಉತ್ತಮ ಸೇವೆಗಾಗಿ ಗಣರಾಜ್ಯೋತ್ಸವದಂದು ರಾಷ್ಟ್ರಪತಿಯಿಂದ ಪ್ರಶಂಸನಾ ಪತ್ರ ಪಡೆದಿದ್ದಾರೆ.
ಮಂಡೆಕೋಲು ಗ್ರಾಮದ ಸುಮಾರು 30 ಮಂದಿ ಯೋಧರು ದೇಶ ಕಾಯುತ್ತಿದ್ದಾರೆ. ಅವರಲ್ಲಿ ಉಗ್ರಾಣಿಮನೆ ಕುಟುಂಬದ 8 ಮಂದಿಯೂ ಸೇರಿದ್ದಾರೆ. ರಘುಪತಿ ಅವರ ಸಾಹಸದ ಕುರಿತು ನಮಗೆ ಹಮ್ಮೆ ಇದೆ ಎಂದು ಮಂಡೆಕೋಲು ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಹೇಳುತ್ತಾರೆ.
Advertisement