
ಬೆಂಗಳೂರು: ಸಂಶೋಧನೆಗೆ ಅದರದ್ದೇಯಾದ ಭಾಷೆಯಿದೆ.ಆ ಭಾಷೆಯನ್ನು ಸಮರ್ಥವಾಗಿ ಪಳಗಿಸಿಕೊಳ್ಳದಹೊರತು ಸಂಶೋಧಕ ಉತ್ತಮ ಕೃತಿ ನೀಡಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಹಾಗೂ ಸಂಶೋಧಕ ಪ್ರೊ.ಷ. ಶೆಟ್ಟರ್ ಅಭಿಪ್ರಾಯಪಟ್ಟರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ ಸಮಿತಿ ಹಾಗೂ ಡಾ. ಮಾಸ್ತಿ ಟ್ರಸ್ಟ್ ವತಿಯಿಂದ 2015ನೇ ಸಾಲಿನಲ್ಲಿ ತಮಗೆ ನೀಡಿದ `ಮಾಸ್ತಿ ಪ್ರಶಸ್ತಿ' ಶನಿವಾರ ಸ್ವೀಕರಿಸಿ ಮಾತನಾಡಿ, ಭಿನ್ನವಾದ ಧಾಟಿಯ ಜತೆಗೆ ರಹದಾರಿಯನ್ನು ಬಿಟ್ಟು ಒಳದಾರಿಯಲ್ಲಿ ಹೋಗುವ ಅವಶ್ಯಕತೆ ಸಂಶೋಧಕನಿಗಿದೆ. ಒಳದಾರಿಗಳು ಕಲ್ಲು, ಮುಳ್ಳುಗಳಿಂದ ತುಂಬಿಕೊಂಡರೂ, ಇದರಿಂದ
ಉತ್ತಮವಾದ ಫಲ ಕಾಣಲು ಸಾಧ್ಯವಾಗುತ್ತದೆ. ಹೊಸ ವಿಚಾರಗಳು ಬರುತ್ತವೆ. ಸಂಶೋಧಕನಿಗೆ ಇದು ಸಾಧ್ಯವಾಗದಿದ್ದರೆ, ಬರೆಯದಿದ್ದರೂ ನಷ್ಟವೇನಿಲ್ಲ ಎಂದರು. ಸಂಶೋಧನೆ ಸಾಹಿತ್ಯಕ್ಕೆ ಈಗ ಮನ್ನಣೆ ಸಿಗುತ್ತಿದೆ. ಈ ಹಿಂದೆ ಸಂಶೋಧನಾ ಕೃತಿಗಳು ಮರು ಮುದ್ರಣ ಕಾಣುವುದೇ ಕಷ್ಟಕರವಾಗಿತ್ತು. ಪರಿಸ್ಥಿತಿ ಈಗ ಬದಲಾಗಿದೆ. ಐಟಿ-ಬಿಟಿ ವಲಯದಲ್ಲಿನ ಮಂದಿ ಆಸಕ್ತಿಯಿಂದ ಓದಿ ಪ್ರತಿಕ್ರಿಯಿಸುವಂತಹ ಬದಲಾವಣೆ ಕಾಣುತ್ತಿದೆ. ಆದರೆ, ವಿಶ್ವ ವಿದ್ಯಾಲಯಗಳಲ್ಲಿ ದೊಡ್ಡ ಸಂಬಳಕ್ಕೆ ದುಡಿಯುವ ಮಂದಿ ಸಂಶೋಧನಾ ಕೃತಿಗಳನ್ನು ಓದಿ ಪ್ರತಿಕ್ರಿಯಿಸಲಾರದಷ್ಟು ಜಡತ್ವ ತಂದುಕೊಂಡಿರುವುದು ವ್ಯಂಗ್ಯ ಮಾದರಿಯಲ್ಲಿ ಕಾಣುತ್ತಿದೆ ಎಂದರು.
ವೈಜ್ಞಾನಿಕ ಕೃತಿಗಳ ಕೊರತೆ: ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ರ್ಯದರ್ಶಿ ಚಿರಂಜೀವಿ ಸಿಂಗ್ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕಥೆ, ಕಾದಂಬರಿ, ವಿಮರ್ಶಾ ಸಾಹಿತ್ಯದಾಚೆ ಪ್ರಸ್ತುತ ಭಾರತದ ಎಲ್ಲ ಭಾಷೆಗಳಲ್ಲೂ ಸಂಶೋಧನೆ ಮತ್ತು ವೈಜ್ಞಾನಿಕ ಕೃತಿಗಳ ಕೊರತೆ ಕಾಣುತ್ತಿದೆ. ಕನ್ನಡದ ಮಟ್ಟಿಗೆ ಪ್ರೊ.ಷ. ಶೆಟ್ಟರ್ ಆ ಕೊರತೆ ನೀಗಿಸುವ ಕೆಲಸ ಮಾಡಿರುವುದು ಶ್ಲಾಘನೀಯ. ಮಾಸ್ತಿ ಅವರಂತಹ ವ್ಯಕ್ತಿತ್ವದ ವ್ಯಕ್ತಿಗಳು ತುಂಬಾ ವಿರಳ. 9ನೇ ತರಗತಿಯಲ್ಲಿದ್ದಾಗಲೇ ಮಾಸ್ತಿ ಅವರು ಬರೆದ `ಮೊಸರು ಮಾರುವ ಮಂಗಮ್ಮ 'ಕಥೆಯನ್ನು ಇಂಗ್ಲಿಷ್ನಲ್ಲಿ ಓದಿದ್ದೆ. ಆ ನಂತರ ಇಲ್ಲಿಗೆ ಬಂದಾಗ ನೇರವಾಗಿ ಅವರ ಪರಿಚಯ ವಾಗಿತ್ತು. ಯುರೋಪಿಯನ್ ಭಾಷೆಯಲ್ಲಿ ಅವರ ಸಾಹಿತ್ಯ ಪ್ರಕಟವಾಗಿದ್ದರೆ ನೊಬೆಲ್ ಪ್ರಶಸ್ತಿ ಸಿಗುತ್ತಿತ್ತು. ಆದರೆ, ಮಾಸ್ತಿ ಅವರು ಕನ್ನಡದ ಆಸ್ತಿ ಆಗಿದ್ದು ಅದಕ್ಕಿಂತ ದೊಡ್ಡದು ಎಂಬುದು ಸಂತಸದ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಜಿ.ಎಸ್. ಸಿದ್ಧಲಿಂಗಯ್ಯ ಮಾತನಾಡಿ, ತಮ್ಮ ಸಾಹಿತ್ಯ ಕೃತಿಗಳ ಶ್ರೇಷ್ಠತೆಯ ಹಾಗೆ ಮಾಸ್ತಿ ಅವರು ವ್ಯಕ್ತಿತ್ವದಲ್ಲೂ ದೊಡ್ಡವರು.
ಬಹುಮುಖ ಪ್ರತಿಭೆ ಹೊಂದಿದ್ದರು. ಅವರ ಹೆಸರಿನಲ್ಲಿ ಮೂವರು ಸಾಹಿತಿಗಳು ಪ್ರಶಸ್ತಿ ಸ್ವೀಕರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ವಾಗಿದೆ ಎಂದರು. `ಮಾಸ್ತಿ ಪ್ರಶಸ್ತಿ'ಗೆ ಪಾತ್ರರಾದ ಪ್ರೊ.ಷ.
ಶೆಟ್ಟರ್, ಡಾ. ಬಿ.ಎನ್. ಸುಮಿತ್ರಾಬಾಯಿ, ಡಾ.ನಾ. ಮೊಗಸಾಲೆ ಅವರ ಕುರಿತು ವಿರ್ಮಶಕ ಎಸ್.ಆರ್.ವಿಜಯ ಶಂಕರ್ ಅಭಿನಂದನಾ ಭಾಷಣ ಮಾಡಿದರು. ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿ ಪದಾಧಿಕಾರಿಗಳಾದ ಬಿ.ಎಸ್. ವೆಂಕಟಾಚಲಪತಿ, ಡಾ.ಗೀತಾ ರಾಮಾನುಜಮ್ ಹಾಜರಿದ್ದರು.
ಮಾಸ್ತಿ ಭವನ ನಿರ್ಮಾಣಕ್ಕೆ ನೆರವು ನೀಡಿ: `ಕನ್ನಡದ ಆಸ್ತಿ' ಎಂದೇ ಖ್ಯಾತಿಯಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹೆಸರಲ್ಲಿ ಸುಸಜ್ಜಿತವಾದ ಭವನ ನಿರ್ಮಿಸಲು ಮಾಸ್ತಿ ಟ್ರಸ್ಟ್ ಮುಂದಾಗಿದೆ. ನಗರದ ಜ್ಞಾನ ಭಾರತಿ ಬಳಿ ಇದಕ್ಕಾಗಿ ಸುಮಾರು 20 ಸಾವಿರ ಚದರಡಿ ಜಾಗವನ್ನು ಖರೀದಿಸಿದೆ. ಟ್ರಸ್ಟ್ ಇದುವರೆಗೆ ಸಂಗ್ರಹಿಸಿದ ಹಣವನ್ನು ಇದಕ್ಕಾಗಿ ವೆಚ್ಚ ಮಾಡಿದೆ. ಈಗ ಕಟ್ಟಡ ನಿರ್ಮಾಣಕ್ಕಾಗಿ ಟ್ರಸ್ಟ್, ಸರ್ಕಾರದ ನೆರವು ಕೋರಿದೆ. ಆದರೆ, ಸರ್ಕಾರ ಸಕಾಲಿಕವಾಗಿ ಮತ್ತು ಸರಿಯಾದ ದಾರಿಯಲ್ಲಿ ನೆರವು ನೀಡದಿ ರುವುದು ಟ್ರಸ್ಟ್ ಸದಸ್ಯರಲ್ಲಿ ಬೇಸರ ತರಿಸಿದೆ. `ಮಾಸ್ತಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಸಲುವಾಗಿ ಸುಸಜ್ಜಿತ ಸಭಾಂಗಣ, ಗ್ರಂಥಾಲಯ, ವಿಶ್ರಾಂತಿ ಕೊಠಡಿ ಹೊಂದಿದ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಕನಿಷ್ಠ ರು. 6 ರಿಂದ ರು. 7 ಕೋಟಿ ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ. ಇದಕ್ಕಾಗಿ ಸರ್ಕಾರದ ನೆರವು ಕೇಳಲಾಗಿದೆ. ಸದ್ಯಕ್ಕೀಗ ಸರ್ಕಾರದಿಂದ ರು. 1 ಕೋಟಿ ಬಿಡುಗಡೆ ಆಗಿದೆ. ಆದರೆ, ಆ ಹಣ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿರುವುದಾಗಿ ಟಿಪ್ಪಣಿ ಕಳುಹಿಸಿದೆ. ಅಲ್ಲಿಗೆ ಹೋದರೆ ಯಾರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವನಕರೆ ರಂಗನಾಥನ್ ಮನವಿ ಮಾಡಿದರು.
Advertisement