ಕಾರವಾರ: ಗ್ರಾಪಂ ನಿರ್ಲಕ್ಷ್ಯದಿಂದ ಹದಿನೈದು ವರ್ಷಗಳಿಂದ ಬಾಯ್ತೆರೆದಿದ್ದ ಮೃತ್ಯುಕೂಪದ ಬಳಿ ಭಾನುವಾರ ಕಪ್ಪೆ ಚಿಪ್ಪು ಆಯಲು ಹೋಗಿದ್ದ ತಾಯಿ-ಮಗ ಬಲಿಯಾಗಿದ್ದಾರೆ.
ಕಾರವಾರದ ವೈಲವಾಡಾ ಗ್ರಾಪಂ ವ್ಯಾಪ್ತಿಯ ಖಾರ್ಗಾ ಗ್ರಾಮದ ಮಹಾದೇವ ದೇವಸ್ಥಾನದ ಬಳಿ ನೆಲ ಬಾವಿಯಲ್ಲಿ ಬಿದ್ದು ಕುಸುಮಾ ರಾಮನಾಥ ಬಾಂದೇಕರ (39), ಮಗ ಆರ್ಯನ್ (8)
ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಕುಸುಮಾ ರಾಮನಾಥ ಬಾಂದೇಕರ ದನಗಳನ್ನು ಮೇಯಿಸಲು ಗದ್ದೆಗೆ ಹೊರಟಿದ್ದರು. ಶಾಲೆ ರಜೆಯಿದ್ದ ಕಾರಣ ಎರಡನೇ ತರಗತಿ ಓದುತ್ತಿದ್ದ ಮಗ ಆರ್ಯನ್ ಹಾಗೂ ನಾಲ್ಕನೇ ವರ್ಗದ ಆಕಾಶ್ ತಾಯಿಯ ಜತೆಗೆ ತೆರಳಿದ್ದರು.
ಆಟ, ಪಾಠದ ಮಾತುಕತೆ ಜತೆಗೆ ಸಾಗುತ್ತಿರುವಾಗ ಮಕ್ಕಳಿಗೆ ಮಳೆಗಾಲದಲ್ಲಿ ಸಿಗುವ ಕೊಂಗೆ (ಕಪ್ಪೆಚಿಪ್ಪು ಜಾತಿಗೆ ಸೇರಿದ ಚಿಪ್ಪು) ಕಣ್ಣಿಗೆ ಬಿದ್ದಿದೆ. ಚಿಕ್ಕ ಮಗ ಆರ್ಯನ್ ಹತ್ತಿಪ್ಪತ್ತು ಚಿಪ್ಪುಗಳನ್ನು ಆಯ್ದು ಮುಂದಕ್ಕೆ ಹೋಗುತ್ತಿರುವಾಗ ಒಮ್ಮೆಲೆ ನೆಲಬಾವಿಯಲ್ಲಿ ಬಿದ್ದಿದ್ದಾನೆ. ಮಗನ ರಕ್ಷಣೆಗೆ ಧುಮುಕಿದ ತಾಯಿಯೂ ಮೃತಪಟ್ಟಿದ್ದಾಳೆ. ಆಕಾಶ್ ತಾಯಿ, ತಮ್ಮನನ್ನು ಕೂಗಿ ಸುಸ್ತಾಗಿ ಮನೆಗೆ ಧಾವಿಸಿದ್ದಾರೆ. ಅಳುತ್ತಾ ಹಿರಿಯರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮಸ್ಥರೆಲ್ಲ ಸೇರಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಪತಿ ರಾಮನಾಥ ಹಾಗೂ ಮಗ ಆಕಾಶ್ನ ಆಕ್ರಂದನ ಮುಗಿಲು ಮುಟ್ಟಿತ್ತು.
Advertisement