

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು, ಉಪನ್ಯಾಸಕರಿಗೆ ನಿವೃತ್ತಿ ವೇಳೆ 1997ರ ಪೂರ್ವಾನ್ವಯವಾಗುವಂತೆ ಗ್ರಾಚ್ಯುಟಿ ನೀಡುವ ಕುರಿತು ಕೇಂದ್ರ ಸರ್ಕಾರ ಗ್ರಾಚ್ಯುಟಿ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಶೈಕ್ಷಣಿಕ ಸಂಸ್ಥೆಗಳ ಬೋಧಕ ಸಿಬ್ಬಂದಿಗೆ ನೀಡಬೇಕಾದ ಗ್ರಾಚ್ಯುಟಿಯನ್ನು 1997ರಿಂದ ಪೂರ್ವಾನ್ವಯವಾಗುವ ದಿಸೆಯಲ್ಲಿ ಕೇಂದ್ರ ಸರ್ಕಾರ ಗ್ರಾಚ್ಯುಟಿ ಪಾವತಿ ಕಾನೂನು-1952ಕ್ಕೆ ತಿದ್ದುಪಡಿ ಮಾಡಿತ್ತು. 2009ರಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಡಾ. ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜು, ದಯಾನಂದ ಸಾಗರ್ ಡೆಂಟಲ್ ಕಾಲೇಜು ಸೇರಿ ಹಲವು ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ವಿಚಾರಣೆ ನಡೆಸಿದ ನ್ಯಾ. ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ, ಗ್ರಾಚ್ಯುಟಿ ಪಾವತಿ ಕಾಯ್ದೆ ಸೆಕ್ಷನ್ 13(ಎ)ಗೆ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಊರ್ಜಿತಗೊಳಿಸಿ, ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಂಸತ್ ಶಾಸನವೊಂದಕ್ಕೆ ಪೂರ್ವಾನ್ವಯ ನೀತಿ ಅಳವಡಿಸಿ ತಿದ್ದುಪಡಿ ಮಾಡುವ ಅಧಿಕಾರ ಇಲ್ಲ. ಇದು ಕಾನೂನಿನ ಸಾಮಾನ್ಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಾದ ಮಂಡಿಸಿದ್ದರು. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ಎಸ್. ದೀಕ್ಷಿತ್ ವಾದ ಮಂಡಿಸಿ, ಪೂರ್ವಾನ್ವಯವಾಗುವಂತೆ ಕಾಯ್ದೆಗೆ ತಿದ್ದುಪಡಿ ಮಾಡುವ ಎಲ್ಲಾ ಅಧಿಕಾರ ಸಂಸತ್ಗೆ ಇದೆ. ಸಂವಿಧಾನದ 41ನೇ ವಿಧಿ ಅನ್ವಯ ನಿವೃತ್ತಿ ಹೊಂದಿದ ಶಿಕ್ಷಕರು, ಉಪನ್ಯಾಸಕರು ಸಮಾಜದಲ್ಲಿ ತಮ್ಮ ಜೀವನ ನಡೆಸಲು ಅನುಕೂಲವಾಗುವಂತೆ ಗ್ಯಾಚ್ಯುಟಿ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸಂಸತ್ನಲ್ಲಿ ಯಾವುದಕ್ಕೆ ತಿದ್ದುಪಡಿ ತರಬೇಕು ಮತ್ತು ತಿದ್ದುಪಡಿ ತಂದರೆ ಯಾವುದು ಸೂಕ್ತ ಮತ್ತು ಸೂಕ್ತವಲ್ಲ ಎಂಬುದನ್ನು ನಿರ್ಧರಿಸುವ ಹಕ್ಕು ಸರ್ಕಾರಕ್ಕಿದೆ. ಅಲ್ಲದೇ ಕಾಯಿದೆ ತಿದ್ದುಪಡಿ ಮಾಡಿದ್ದನ್ನು ಮುಂಬೈ ಮತ್ತು ಗುಜರಾತ್ ಹೈಕೋರ್ಟ್ಗಳು ಎತ್ತಿ ಹಿಡಿದಿದೆ. ಈ ಕಾರಣಕ್ಕಾಗಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲವಾಗಿದ್ದ, ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ವಜಾಗೊಳಿಸಬೇಕು ಎಂದು ವಾದಿಸಿದರು.