ಬೆಂಗಳೂರು: ನಗರದ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ಕಮಾನುಗಳನ್ನು(ಆರ್ಚ್) ನಿರ್ಮಿಸದಂತೆ ಹೈಕೋರ್ಟ್ ಬಿಬಿಂಪಿಗೆ ನಿರ್ದೇಶನ ನೀಡಿದೆ.
ಪ್ರಶಾಂತ ನಗರದಲ್ಲಿನ ರಸ್ತೆಯಲ್ಲಿ ಮೇಯರ್ ನಿಧಿಯಿಂದ ರೂ 95.64 ಲಕ್ಷ ವೆಚ್ಚದಲ್ಲಿ ಬಿಬಿಎಂಪಿ ಸಂಗೊಳ್ಳಿ ರಾಯಣ್ಣ ಕಮಾನು ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯ ನಿವಾಸಿ ಬಿ.ಎಸ್ ವಿಜಯ್ ಎಂಬುವವರು ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಎಸ್.ಕೆ ಮುಖರ್ಜಿ ಹಾಗೂ ನ್ಯಾ.ಬಿ.ವಿ ನಾಗರತ್ನ ಅವರ ವಿಭಾಗೀಯ ಪೀಠ, ಪ್ರಶಾಂತನಗರದ ರಸ್ತೆಯಲ್ಲಿ ನಿರ್ಮಿಸುತ್ತಿರುವ ಕಮಾನುಗಳನ್ನು ತೆರವುಗೊಳಿಸುವ ಸಂಬಂಧ ಅರ್ಜಿದಾರರು ಬಿಬಿಎಂಪಿಗೆ ಮನವಿ ಸಲ್ಲಿಸಬೇಕು. ಆ ಮನವಿಯನ್ನು ಬಿಬಿಎಂಪಿ ಮೂರು ತಿಂಗಳಲ್ಲಿ ಪರಿಗಣಿಸಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.
ನ್ಯಾಯಮೂರ್ತಿ ಅಸಮಾಧಾನ: ಬಿಬಿಎಂಪಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ಬಿವಿ ನಾಗರತ್ನ, ಮೇಯರ್ ಹಣದಿಂದ ಈ ಕಮಾನುಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳಲ್ಲಿ ಕಮಾನು ನಿರ್ಮಿಸುವ ಮೂಲಕ ಹಣವನ್ನು ಪಾದಾಚಾರಿಗಳ ಮಾರ್ಗವನ್ನು ಸ್ವಚ್ಛಗೊಳಿಸಲು ಹಾಗೂ ನಿರ್ವಹಣೆಗೆ ಬಳಸಿ ಎಂದು ಬಿಬಿಎಂಪಿ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿದರು.
ಕಮಾನು ನಿರ್ಮಿಸುತ್ತಿರುವುದರಿಂದ ರಸ್ತೆ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದ ಅರ್ಜಿದಾರರು ದೂರಿದರು. ಕಮಾನುಗಳನ್ನು ಯಾರ ಹಣದಿಂದ ನಿರ್ಮಾಣ ಮಾಡುತ್ತಿದ್ದೀರಿ? ಇವೆಲ್ಲವೂ ಸಾರ್ವಜನಿಕರ ಹಣವಲ್ಲವೇ? ಎಂದು ಪಾಲಿಕೆ ಕಾರ್ಯವೈಖರಿಗೆ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
Advertisement