ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ ಆರಂಭಿಸಿರುವ ಬಿಜೆಪಿ ಕಾಂಗ್ರೆಸ್ ಪಕ್ಷ ಸೆಡ್ಡು ಹೊಡೆದಿದೆ.
ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಬಿಜೆಪಿ ನಿಯೋಜಿತ ವಕೀಲ ನಟರಾಜ್ ಶರ್ಮಾ ಮತ್ತು ದೊರೆರಾಜು ದಾಖಲೆ ಸಲ್ಲಿಸಿದ ಬೆನ್ನಲ್ಲೇ, ಕಾಂಗ್ರೆಸ್ ಕಾನೂನು ಘಟಕವೂ ಸಹ ದಾಖಲೆಗಳನ್ನ ಸಲ್ಲಿಸಿದೆ. ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಧನಂಜಯ್ ನೇತೃತ್ವದಲ್ಲಿ ಕೆಂಪಣ್ಣ ಆಯೋಗದ ಕಾರ್ಯದರ್ಶಿ ಶ್ರೀವತ್ಸ ಕೆದಿಲಾಯ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಪರ ವಕೀಲರು, ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ.
'ಅರ್ಕಾವತಿ ವಾಸ್ತವ ವರದಿ' ಎನ್ನುವ ಹೆಸರಿನಲ್ಲಿ ನಿನ್ನೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಕಿರುಹೊತ್ತಿಗೆ ಮತ್ತು ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕುರಿತಂತೆ ಸರ್ಕಾರ ಮಾಡಿರುವ ತೀರ್ಮಾನಗಳ ಕುರಿತಾದ ದಾಖಲೆಗಳನ್ನು ಕಾಂಗ್ರೆಸ್ ಪರ ವಕೀಲರು ಕೆಂಪಣ್ಣ ಆಯೋಗಕ್ಕೆ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷ ಧನಂಜಯ ಅವರು, ಬಿಜೆಪಿ ಸಲ್ಲಿಸಿರೋ ದಾಖಲೆಗಳ ಬಗ್ಗೆ ಟೀಕಾ ಪ್ರಹಾರ ನಡೆಸಿದರು.
ಇದೇ ಪ್ರಕರಣ ಸಂಬಂಧ ಜೆಡಿಎಸ್ ಕೂಡ ಸುಮಾರು 800 ಪುಟಗಳ ಹೊತ್ತಿಗೆ ಬಿಡುಗಡೆ ಮಾಡಿದ್ದರು. ಈ ಹೊತ್ತಿಗೆಯನ್ನು ರಾಜ್ಯಪಾಲರು ಸೇರಿದಂತೆ ಕೆಂಪಣ್ಣ ಆಯೋಗಕ್ಕೂ ಕೂಡ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಅವರು ಅದಾವುದನ್ನು ಮಾಡಿಲ್ಲ. ಬಿಜೆಪಿ ನೀಡಿರುವ ವರದಿಯಲ್ಲಿ ಜೆರಾಕ್ಸ್ ಪ್ರತಿಗಳ ತುಂಬಿದ್ದು, ಅದರಲ್ಲಿ ಯಾವುದೇ ರೀತಿಯ ಸತ್ಯಾಂಶಗಳಿಲ್ಲ. ಜನತೆಯನ್ನು ತಪ್ಪುದಾರಿಗೆಳೆಯಲು ಅವರು ಇಂತಹ ದಾರಿ ಹಿಡಿದಿದ್ದಾರೆ. ಸರ್ಕಾರದ ಮೇಲೆ ಗೂಬೆ ಕೂರಿಸಲು ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದೆ ಎಂದು ಧನಂಜಯ ಅವರು ಹೇಳಿದರು.
Advertisement