ಮೃತ್ಯುವಾಯ್ತು ಶೌಚಾಲಯ ಗೇಟ್

ಸಾರ್ವಜನಿಕ ಶೌಚಾಲಯದ ಗೇಟ್ ಮೂಲಕ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕಲಾಸಿಪಾಳ್ಯ ಸಮೀಪದ ಮೋತಿಲಾಲ್...
ವಿದ್ಯುತ್  ಪ್ರವಾಹ (ಸಾಂದರ್ಭಿಕ ಚಿತ್ರ)
ವಿದ್ಯುತ್ ಪ್ರವಾಹ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಾರ್ವಜನಿಕ ಶೌಚಾಲಯದ ಗೇಟ್ ಮೂಲಕ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕಲಾಸಿಪಾಳ್ಯ ಸಮೀಪದ ಮೋತಿಲಾಲ್ ನಗರದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಉತ್ತರ ಭಾರತ ಮೂಲದ ಪ್ರಕಾಶ್ ಕುಮಾರ್(19) ಮೃತರು. ಮೋತಿ ನಗರ ಗಂಗಮ್ಮಚಾರಿ ಸ್ಟ್ರೀಟ್‍ನಲ್ಲಿರುವ ಭಕ್ರಾರಾಮ್ ಎಂಬುವರಿಗೆ ಸೇರಿದ ಮಳಿಗೆಯಲ್ಲಿ ಪ್ರಕಾಶ್ ಕೆಲಸ ಮಾಡುತ್ತಿದ್ದರು. ಸಂಜೆ 6.45ರ ಸುಮಾರಿಗೆ ಅಂಗಡಿ ಸಮೀಪದಲ್ಲೇ ಇರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದರು. ನಿಸರ್ಗ ಕರೆ ಮುಗಿಸಿ ವಾಪಸ್ ಬರುವ ವೇಳೆ ಶೌಚಾಲಯದ ಕಬ್ಬಿಣದ ಗೇಟ್‍ನ್ನು ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಗಮಿಸಿದ ಸ್ಥಳೀಯರು ಮಾಲೀಕ ಭಕ್ರಾರಾಮ್ ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅವರು ಕೂಡಲೇ ಕಿಮ್ಸ್  ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಪ್ರಕಾಶ್ ಮೃತಪಟ್ಟಿದ್ದರು. ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಹೊತ್ತಿರುವ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ  ಭಕ್ರಾರಾಮ್ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶೌಚಾಲಯದಲ್ಲಿ ನಿರ್ವಹಣೆ ಸಿಬ್ಬಂದಿ ಇರುವುದಿಲ್ಲ. ಬೆಳಗ್ಗೆ 8 ಗಂಟೆಗೆ ಬಂದು ಬಾಗಿಲು ತೆಗೆದರೆ ರಾತ್ರಿ 8 ಗಂಟೆಗೆ ಬಾಗಿಲು ಹಾಕುತ್ತಾರೆ. ಸ್ವಚ್ಛತೆಯಂತೂ ದೂರದ ಮಾತು.ಶನಿವಾರ ಸಂಜೆ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿದೆ. ಶೌಚಾಲಯದ ಪಕ್ಕದಲ್ಲೇ ವಿದ್ಯುತ್ ಕಂಬದಿಂದ ವೈರ್‍ಗಳು ನೇತಾಡುತ್ತಿವೆ. ಮಳೆ ಬಂದಾಗ ವಿದ್ಯುತ್ ವೈರ್‍ಗಳು ಶೌಚಾಲಯದ ಕಬ್ಬಿಣದ ಗೇಟ್ ಸಂಪರ್ಕಕ್ಕೆ ಬಂದಿರಬಹುದು. ಈ ಬಗ್ಗೆ ಅರಿಯದ ಪ್ರಕಾಶ ಆಕಸ್ಮಿಕವಾಗಿ ಗೇಟ್ ಮುಟ್ಟಿದಾಗ ಭಾರಿ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರಬಹುದು ಅಥವಾ ಶೌಚಾಲಯಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ವೈರ್‍ಗಳಲ್ಲಿ ದೋಷ ಉಂಟಾಗಿ ಗೇಟ್‍ಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಲಾಸಿಪಾಳ್ಯ ಪೋ ಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com