ಬೆಂಗಳೂರು: ನಗರದ ದೇವರ ಜೀವನಹಳ್ಳಿ ಬಳಿ ರಾಜ ಕಾಲುವೆ ಹಾಗೂ ಸುತ್ತಮುತ್ತ ಶೇಖರಣೆ ಆಗಿರುವ ತ್ಯಾಜ್ಯವನ್ನು ಮಾ.16ರ ಒಳಗೆ ವಿಲೇವಾರಿ ಮಾಡುವಂತೆ ಪಾಲಿಕೆಗೆ ಹೈಕೋರ್ಟ್ ಆದೇಶಿಸಿದೆ.
ದೇವರ ಜೀವನಹಳ್ಳಿ ಬಳಿ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಕೋರಿ ಆರ್ ಟಿಐ ಕಾರ್ಯಕರ್ತ ಪಿ.ಉದಯ್ ಕುಮಾರ್ ಸೇರಿ ಐವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ರಾಜಕಾಲುವೆ, ಚರಂಡಿ ಹಾಗೂ ರಸ್ತೆಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ಮಾ.16ರ ಒಳಗೆ ತೆರವುಗೊಳಿಸಿ, ರಾಜಕಾಲುವೆ ದುರಸ್ತಿ ಕೆಲಸ ಇಂದಿನಿಂದಲೇ ಆರಂಭಿಸಬೇಕು.
ಪಾಲಿಕೆ ತೆಗೆದುಕೊಂಡಿರುವ ಕ್ರಮದ ಕುರಿತು ದಾಖಲೆ ಸಮೇತ ಮುಂದಿನ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವಂತೆ ಪಾಲಿಕೆಗೆ ಆದೇಶಿಸಿ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜಕಾಲುವೆ ಒತ್ತುವರಿಯಾಗಿದ್ದು ಇದರಿಂದಾಗಿ ಅಲ್ಲಿನ ನಿವಾಸಿಗಳು ಜೀವನ ನಡೆಸುವುದೇ ಕಷ್ಟಕರವಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಗಳಿಗೆ ಹರಿಯುವ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ಈ ಹಿಂದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಒತ್ತುವರಿ ತೆರವುಗೊಳಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
Advertisement