ಬೆಂಗಳೂರು: ವಾರಾಂತ್ಯದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರಿದಿದ್ದು ಯಲಹಂಕ, ಬಸವೇಶ್ವರ ನಗರ ಹಾಗೂ ಜಯನಗರದಲ್ಲಿ ದುಷ್ಕರ್ಮಿಗಳು ಮೂವರು ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿ ಗಳು, ಮನೆ ಮುಂದೆ ನಿಂತಿದ್ದ ಜಯಲಕ್ಷ್ಮಮ್ಮ (65) ಎಂಬುವರ 14 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ಸರ ಕಿತ್ತುಕೊಂಡ ದುಷ್ಕರ್ಮಿ ಸಮೀಪದಲ್ಲೇ ಬೈಕ್ ಚಾಲೂ ಮಾಡಿಕೊಂಡು ನಿಂತಿದ್ದ ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ.
ಬಸವೇಶ್ವರನಗರ ಸಮೀಪದ ಮಹಾಗಣಪತಿ ನಗರ 6ನೇ ಮುಖ್ಯರಸ್ತೆಯಲ್ಲಿ ಶುಕ್ರವಾರ ಸಂಜೆ ಸರಗಳ್ಳರು ಉಷಾ ಎಂಬುವರಿಂದ 12 ಗ್ರಾಂ ಸರ ದೋಚಿದ್ದಾರೆ. ವಿಧಾನಸೌಧದಲ್ಲಿ ಉದ್ಯೋಗಿಯಾಗಿರುವ ಉಷಾ, ಕೆಲಸ ಮುಗಿಸಿಕೊಂಡು ಸಂಜೆ 5.30ಕ್ಕೆ ಮನೆಗೆ ಹಿಂದಿರುಗುತ್ತಿದ್ದರು. ಬಸ್ ಇಳಿದು ಮನೆಗೆ ನಡೆದು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಸರ ಕಿತ್ತು ಕೊಂಡು ಪರಾರಿಯಾಗಿದ್ದಾರೆ.
ಜಯನಗರ 8ನೇ ಬ್ಲಾಕ್ನಲ್ಲಿ ಶುಕ್ರವಾರ ಸಂಜೆ ತಮ್ಮ ಮನೆ ಎದುರು ಸುಬ್ಬಲಕ್ಷ್ಮಿ ಎಂಬುವರು ವಾಯುವಿಹಾರ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು 23 ಗ್ರಾಂ ಸರ ದೋಚಿದ್ದಾರೆ. ಟ್ರಾಫಿಕ್ ಸಿಗ್ನಲ್ ಹಾಗೂ ಸಮೀಪದ ವಾಣಿಜ್ಯ ಮಳಿಗೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement