ತುಮಕೂರು: ರವಿ ಸಮಾಧಿ ಇನ್ನು ಸ್ಮಾರಕವಾಗಲಿದೆ. ರವಿ ಅವರ ಜನಪರ ಕಾಳಜಿ ಮತ್ತು ಆದರ್ಶ ಕೆಲಸಗಳು ಮುಂದಿನ ತಲೆ ಮಾರಿಗೆ ಸ್ಫೂರ್ತಿಯಾಗಬೇಕೆಂಬ ಆಶಯದೊಂದಿಗೆ ಸ್ಮಾರಕ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಮುಂತಾದ ಕಡೆಗಳಿಂದ ಸೋಮವಾರ ಆಗಮಿಸಿದ್ದ ರವಿ ಅಭಿಮಾನಿಗಳು ಸಮಾಧಿಗೆ ನಮಸ್ಕರಿಸಿದ ಬಳಿಕ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರವಿ ಅಭಿಮಾನಿಗಳು ಶೀಘ್ರ ಭೇಟಿ ಮಾಡಿ ಸ್ಮಾರಕ ನಿರ್ಮಿಸಲು ಮನವಿ ಪತ್ರ ಸಲ್ಲಿಸಲಿದ್ದಾರೆ. ಒಂದು ಸರ್ಕಾರ ಸ್ಪಂದಿಸದಿದ್ದರೆ ತಾವೇ ಸ್ಮಾರಕ ನಿರ್ಮಿಸಲಿದ್ದಾರೆ. ಅಲ್ಲದೆ ರವಿ ಸ್ಮಾರಕ ನಿರ್ಮಾಣ ಸಂಬಂಧ ಶೀಘ್ರ ಸಭೆ ಕರೆಯಲಿದ್ದಾರೆ. ಹೋರಾಟಗಾರರ ಅಭಿಪ್ರಾಯ ಪಡೆದು, ಸ್ಮಾರಕದ ರೂಪರೇಷೆ ಬಗ್ಗೆ ಚರ್ಚಿಸಲಿದ್ದಾರೆ.
ಈ ಸಂಬಂಧ ರವಿ ಕುಟುಂಬದ ಜತೆ ಚರ್ಚಿಸಿ ಒಪ್ಪಿಗೆ ಪಡೆಯಲಿದ್ದೇವೆ ಎಂದು ಡಿ.ಕೆ.ರವಿ ಅಭಿಮಾನಿ ಕೋಲಾರದ ವೆಂಕಟೇಶ್ ಹೇಳಿದ್ದಾರೆ.
Advertisement