
ಬೆಂಗಳೂರು: ಪಟ್ಟಾಭಿರಾಮನಗರದಲ್ಲಿ ಜಟ್ಟಿ ಸಂಘ ಒತ್ತುವರಿ ಮಾಡಿದ್ದ ರು.60 ಕೋಟಿ ಮೌಲ್ಯದ 35 ಸಾವಿರ ಚ.ಅಡಿ ಭೂಮಿಯನ್ನು ಬಿಬಿಎಂಪಿ ವಶಪಡಿಸಿಕೊಂಡಿದೆ.
ಆಟದ ಮೈದಾನದಲ್ಲಿ ಅನಧಿಕೃತವಾಗಿ ಕಾಂಪೌಂಡ್ ಗೋಡೆ ನಿರ್ಮಿಸಿದ್ದ ಜಟ್ಟಿ ಸಂಘ, ಈ ಜಾಗದಲ್ಲಿ ವಾಚ್ಮೆನ್ ಶೆಡ್ ನಿರ್ಮಿಸಿಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ದಕ್ಷಿಣ ವಲಯದ ಜಂಟಿ ಆಯುಕ್ತ ಎ.ಬಿ.ಹೇಮಚಂದ್ರ ಅವರ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. 1992ರಿಂದ ಈ ಜಾಗವನ್ನು ಆಟದ ಮೈದಾನವೆಂದು ಘೋಷಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು. `ಜಟ್ಟಿ ಕಮ್ಯುನಿಟಿ ಟ್ರಸ್ಟ್ ' ಈ ಜಾಗದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿ ಒತ್ತುವರಿ ಮಾಡಿಕೊಂಡಿತ್ತು.
ಈ ವಿವಾದ ನ್ಯಾಯಾಲಯದ ಮೇಟ್ಟಿಲೇರಿದ್ದು, ಬಿಬಿಎಂಪಿಗೆ ಸೇರಿದ ಜಾಗ ಎಂದು ತೀರ್ಪು ನೀಡಲಾಗಿತ್ತು. ಹಲವು ಬಾರಿ ನೋಟಿಸ್ ನೀಡಿದ್ದರೂ ತೆರವು ಮಾಡಲು ಸಂಘ ಮುಂದಾಗಿರಲಿಲ್ಲ. ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನದ ವೇಳೆಗೆ ಪೂರ್ಣಗೊಂಡಿತು.
Advertisement