ಬೆಂಗಳೂರು: ನೆರೆಮನೆಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂದ್ರಶೇಖರ್ ರೆಡ್ಡಿ(31) ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಮ್ಮ ಬಡಾವಣೆಯ ಆರೋಪಿ ಚಂದ್ರಶೇಖರ್ ಟೈಲ್ಸ್ ಹಾಸುವ ಕೆಲಸ ಮಾಡುತ್ತಿದ್ದ. ಈತನಿಗೆ ವಿವಾಹವಾಗಿದ್ದು ಒಬ್ಬ ಮಗನಿದ್ದಾನೆ. ನೊಂದ ಮಹಿಳೆ ಕೈಮಗ್ಗ ಕೆಲಸ ಮಾಡುತ್ತಿದ್ದು, ಪತಿ ಹಾಗೂ ಮಗಳೊಂದಿಗೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದಾರೆ. ನೊಂದ ಮಹಿಳೆ ಪತಿ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದರಿಂದ ಮನೆಯಲ್ಲಿ ಒಬ್ಬರೇ ಇದ್ದರು. ಹೀಗಾಗಿ, ರಾತ್ರಿ ತಮ್ಮ ಮನೆಯಲ್ಲಿ ಮಲಗುವಂತೆ ನೆರೆಮನೆಯ ಮಧ್ಯ ವಯಸ್ಸಿನ ಮಹಿಳೆ ಬಳಿ ಮನವಿ ಮಾಡಿದ್ದರು. ಅದರಂತೆ ನೆರೆಮನೆಯವರು ಬುಧವಾರ ರಾತ್ರಿ ಉಳಿದುಕೊಂಡಿದ್ದರು.
ತಡರಾತ್ರಿ 1 ಗಂಟೆ ಸುಮಾರಿಗೆ ಆರೋಪಿ ಚಂದ್ರಶೇಖರ್ ಬಾಗಿಲು ಬಡಿದಿದ್ದಾನೆ. ಎಚ್ಚರಗೊಂಡ ಮಹಿಳೆ, ಪರಿಚಿತರು ಬಂದಿರಬಹುದು ಎಂದು ಅವರು ಬಾಗಿಲು ತೆಗೆದಾಗ ಮನೆಯೊಳಗೆ ನುಗ್ಗಿದ ಆರೋಪಿ ಅತ್ಯಾಚಾರ ಎಸಗುವ ಬೆದರಿಕೆ ಹಾಕಿದ್ದಾನೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನೆರೆಮನೆ ಮಹಿಳೆ ಭೀತಿಯಿಂದ ಹೊರ ಹೋದಾಗ ಒಂಟಿ ಮಹಿಳೆ ಮೇಲೆ ಚಂದ್ರಶೇಖರ್ ಅತ್ಯಾಚಾರ ಎಸಗಿದ್ದಾನೆ ಎಂದು ಗುರುವಾರ ಬೆಳಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಚಂದ್ರಶೇಖರ್ ಹಾಗೂ ನೊಂದ ಮಹಿಳೆ ಕುಟುಂಬದ ನಡುವೆ ಜಗಳ ಮಂಗಳವಾರ ಜಗಳವಾಗಿದ್ದು ನಿಮಗೆ ಪಾಠ ಕಲಿಸುತ್ತೇನೆ ಎಂದು ಚಂದ್ರಶೇಖರ್ ಬೆದರಿಸಿದ್ದನಂತೆ. ಆರೋಪಿ ಚಂದ್ರಶೇಖರ್ ಹಾಗೂ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಚಂದ್ರಶೇಖರ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕವೇ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.
Advertisement