ಕನ್ನಡಕ್ಕೆ ಜೈ ಕಲಿಸಲು ಸೈ

ಕನ್ನಡ ಉಳಿಸುವ ಹಾಗೂ ಶಿಕ್ಷಕರ ಕಣ್ಣೀರು ಒರೆಸುವ ಮೂರು ಪ್ರಮುಖ ವಿಧೇಯಕಗಳನ್ನು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಗುರುವಾರ ಮಂಡಿಸಿದೆ...
ವಿಧಾನಸಭೆ
ವಿಧಾನಸಭೆ

ವಿಧಾನಸಭೆ: ಕನ್ನಡ ಉಳಿಸುವ ಹಾಗೂ ಶಿಕ್ಷಕರ ಕಣ್ಣೀರು ಒರೆಸುವ ಮೂರು ಪ್ರಮುಖ ವಿಧೇಯಕಗಳನ್ನು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಗುರುವಾರ ಮಂಡಿಸಿದೆ.

ಕನ್ನಡಕ್ಕೆ ಸಂಬಂಧಿಸಿದಂತೆ ಎರಡೂವರೆ ದಶಕದ ಕೂಗಿಗೆ ಕೊನೆಗೂ ಅನಿವಾರ್ಯವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ, ಕನ್ನಡ ಭಾಷಾ ಕಲಿಕೆ ವಿಧೇಯಕ ಹಾಗೂ ಶಿಕ್ಷಣ ಹಕ್ಕು ಕಾಯ್ದೆ  ತಿದ್ದುಪಡಿ ವಿಧೇಯಕವನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಂಡಿಸಿದ್ದಾರೆ.
 
ರಾಜ್ಯದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳು 1ರಿಂದ 10ನೇ ತರಗತಿವರೆಗೆ ಕಡ್ಡಾಯವಾಗಿ ಒಂದು ಭಾಷೆಯನ್ನಾಗಿ ಕನ್ನಡ ಕಲಿಸಬೇಕು ಎಂದು ಕನ್ನಡ ಭಾಷಾ ಕಲಿಕೆ ವಿಧೇಯಕದಲ್ಲಿ ಹೇಳಲಾಗಿದೆ. ಇನ್ನು ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ಕಲಿಕಾ ಮಾಧ್ಯಮವೂ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡದಲ್ಲಿಯೇ ಇರಬೇಕು ಎಂದು ಹೇಳಲಾಗಿದೆ.

ಈ ಮೂಲಕ ರಾಜ್ಯದಲ್ಲಿ ಕನ್ನಡ ಉಳಿಸುವ ಹೋರಾಟಕ್ಕೆ ಸರ್ಕಾರ ಬೆಂಬಲವಾಗಿ ನಿಂತಿದೆ. ಕಲಿಕಾ ಮಾಧ್ಯಮದ ನಿರ್ಧಾರ ವಿದ್ಯಾರ್ಥಿ ಅಥವಾ ಪಾಲಕರಿಗೆ ಇಲ್ಲ ಎಂದು ಈ ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮತ್ತೊಂದು ಮಹತ್ವದ ತಿದ್ದುಪಡಿ ಮಂಡಿಸಿರುವ ಶಿಕ್ಷಣ ಸಚಿವರು, ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕಕ್ಕೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಈ ಮೂಲಕ ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಮಿತಿಯನ್ನು ಶೇ.5ರಿಂದ ಶೇ.8ಕ್ಕೆ ಏರಿಸಲಾಗಿದೆ. ಹಾಗೆಯೇ ಪತಿ-ಪತ್ನಿ ಪ್ರಕರಣದಲ್ಲಿನ ನಿಯಮಗಳನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದೆ.

ಏನಿದು ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ? : ಸಂವಿಧಾನದ 350(ಎ) ಅನುಚ್ಛೇದದ ಪ್ರಕಾರ ಭಾಷಾ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಮಕ್ಕಳ ವಿದ್ಯಾಭ್ಯಾಸ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿಯೇ ಇರಬೇಕು. ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರು ಹಾಗೂ ಬರಹಗಾರರೊಂದಿಗೆ ನಡೆದ ಸವಿಸ್ತಾರ ಚರ್ಚೆಯಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು ಎಂದು ಅವಿರೋಧವಾಗಿ ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ  2009ರ ಅಧಿ ನಿಯಮ 35ಕ್ಕೆ ತಿದ್ದುಪಡಿ ತಂದು 1ರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಅಥವಾ ಮಾತೃಭಾಷೆ ಮಾಧ್ಯಮದಲ್ಲಿಯೇ ಕಲಿಸಬೇಕು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ಸಂವಿಧಾನದ ಅನುಚ್ಛೇದ 21 ಅಥವಾ 21(ಎ) ಪ್ರಕಾರ ಯಾವುದೇ ವಿದ್ಯಾರ್ಥಿ ಅಥವಾ ಪಾಲಕರು ಕಲಿಕಾ ಮಾಧ್ಯಮ ತಮ್ಮ ಆಯ್ಕೆ ಎಂದು ವಾದ ಮಂಡಿಸಲು ಸಾಧ್ಯವಿಲ್ಲ.

ಕನ್ನಡ ಭಾಷಾ ಕಲಿಕೆ ವಿಧೇಯಕದಲ್ಲೇನಿದೆ?: ಕಲಿಕಾ ಮಾಧ್ಯಮದ ಕುರಿತ ತಿದ್ದುಪಡಿಗೆ ಕಾನೂನು ಮಾನ್ಯತೆ ಸಿಗುವ ಬಗ್ಗೆ ರಾಜ್ಯ ಸರ್ಕಾರವೇ ಖಾತ್ರಿ ಹೊಂದಿರದ ಕಾರಣ ಮಂಡನೆಯಾಗುತ್ತಿರುವ ವಿಧೇಯಕವಿದು. ರಾಜ್ಯದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲೇಬೇಕು ಎನ್ನುವುದು ಈ ನೂತನ ವಿಧೇಯಕದ ಸಾರ. ಅಲ್ಪಸಂಖ್ಯಾತ, ಖಾಸಗಿ ಸೇರಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ 1ರಿಂದ 10ನೇ ತರಗತಿವರೆಗೆ ಒಂದು ಭಾಷೆಯನ್ನಾಗಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com