ಬ್ಯಾಂಕ್ ಗ್ರಾಹಕರ ದೋಚುತ್ತಿದ್ದವರ ಸೆರೆ
ಬೆಂಗಳೂರು:ಬ್ಯಾಂಕಿನಲ್ಲಿ ಲಕ್ಷಾಂತರ ಹಣ ಡ್ರಾ ಮಾಡಿಕೊಂಡು ಹೊರಗೆ ಬರುವ ಸಾರ್ವಜನಿಕರ ಬಳಿ ರು.10ರ ನೋಟು ಬೀಳಿಸಿ ಗಮನ ಸೆಳೆದು ಅವರ ಬಳಿ ಇರುವ ಲಕ್ಷಾಂತರ ನಗದು ದೋಚುತ್ತಿದ್ದ ಅಂತಾರಾಜ್ಯ ಗ್ಯಾಂಗ್ನ 6 ಸದಸ್ಯರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಚಿತ್ತೂರು ಜಿಲ್ಲೆಯ ಓಜಗುಪ್ಪಂ ಗ್ರಾಮದ ನಿವಾಸಿ ಪಿ. ದಾಸ್(35), ಡಿಲ್ಲಿ(40), ವೆಂಕಟರಮಣ(28), ಮೋಹನ್ ರಾವ್(34), ಬಾಲರಾಜ್(45) ಮತ್ತು ರಮೇಶ್ (40) ಬಂಧಿತರು. ಇವರಿಂದ ರು.17 ಲಕ್ಷ ನಗದು, 90 ಗ್ರಾಂ ಚಿನ್ನಾಭರಣ, 20 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ನಡೆದಿದ್ದ ಆರು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ಇನ್ನೂ ಹತ್ತಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಕ್ಕಿಬಿದ್ದದ್ದು ಹೇಗೆ?
ಆರೋಪಿಗಳು ಸಿಸಿ ಕ್ಯಾಮರಾದಲ್ಲಿ ತಮ್ಮ ಮುಖ ಸೆರೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವುದರಲ್ಲಿ ನಿಸ್ಸೀಮರು. ಆದರೆ, ಇತ್ತೀಚೆಗೆ ಉದ್ಯಮಿ ಅಮಿತ್ ಮತ್ತು ಗಾಯತ್ರಿ ದಂಪತಿ ಬೆಂಗಳೂರಿನ ಮಾವನ ಮನೆಗೆ ಬಂದಿದ್ದರು. ಏ.10ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಯಾಂಕ್ನಲ್ಲಿ ರು.16 ಲಕ್ಷ ಡ್ರಾ ಮಾಡಿ ಅದನ್ನು ಕಾರಿನಲ್ಲಿಟ್ಟು ವಿದ್ಯಾರಣ್ಯಪುರದ ಆರ್ಚ್ ಬಳಿ ಇರುವ ಮಾವನ ಮನೆಗೆ ಹೋಗಿದ್ದರು.
ಹಣ ಡ್ರಾ ಮಾಡಿದ ಬ್ಯಾಂಕ್ನಿಂದಲೇ ಅಮಿತ್ ಅವರನ್ನು ಹಿಂಬಾಲಿಸಿದ್ದ ಖದೀಮರು ಕಾರಿನ ಗಾಜು ಹೊಡೆದು ಹಣದ ಬ್ಯಾಗ್ ದೋಚಿದ್ದರು. ಇದನ್ನು ಗಮನಿಸಿದ್ದ ಬಾಲಕಿಯೊಬ್ಬಳು, ಅಮಿತ್ ದಂಪತಿಗೆ ವಿಷಯ ತಿಳಿಸಿದ್ದರು. ಅಲ್ಲದೆ, ಬಾಲಕಿ ಪ್ರಮುಖ ಸುಳಿವು ಹಾಗೂ ಆರೋಪಿಗಳು ಬಳಕೆ ಮಾಡುತ್ತಿದ್ದ ಮೊಬೈಲ್ ನೆಟ್ವರ್ಕ್ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
ಇವರು ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಪುಣೆ, ಚೆನ್ನೈ ಮುಂತಾದೆಡೆಯೂ ಕೃತ್ಯ ಎಸಗುತ್ತಿದ್ದರು ಎಂದು ಆಯುಕ್ತ ರೆಡ್ಡಿ ತಿಳಿಸಿದರು. ಐದು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಇವರು ಕಲ್ಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ಬೆಳಿಗ್ಗೆ ಗ್ರಾಹಕರ ಸೋಗಿನಲ್ಲಿ ಬ್ಯಾಂಕ್ ಗಳಿಗೆ ತೆರಳುತ್ತಿದ್ದರು.
ಒಂದು ವೇಳೆ ಗ್ರಾಹಕ ವಾಹನ ನಿಲ್ಲಿಸದೆ ಸಾಗುತ್ತಿದ್ದರೆ ತಾವೇ ಬೈಕ್ ನಿಂದ ಗುದ್ದಿ ವಾಹನ ನಿಲ್ಲಿಸುತ್ತಿದ್ದರು. ನಂತರ ರಾಜಿ ಸಂಧಾನ ನೆಪದಲ್ಲಿ ಬಂದು ಕೃತ್ಯ ಎಸಗುತ್ತಿದ್ದರು. ಇದಲ್ಲದೆ, ಸಿಗ್ನಲ್, ಪಾರ್ಕಿಂಗ್ ಸ್ಥಳದಲ್ಲಿ ನಿಂತಾಗ ನೋಟು ಎಸೆದು ಅಥವಾ ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಕೈಚಳಕ ತೋರುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ