ರೇಷ್ಮೆ ಆಮದು ಸುಂಕ ಕಡಿಮೆ: ರೈತರ ಪ್ರತಿಭಟನೆ
ವಿಜಯಪುರ: ಕೇಂದ್ರ ಸರ್ಕಾರವು ರೇಷ್ಮೆ ಆಮದು ಸುಂಕವನ್ನು ಕಡಿಮೆ ಮಾಡಿರುವುದನ್ನು ವಿರೋಧಿಸಿ ರೈತರು ಹಾಗೂ ರೀಲರ್ ಗಳು ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಳ್ಳೂರು ಶಿವಣ್ಣೆ ಮಾತನಾಡಿ, ಹಿಂದೆ ಇದ್ದ ರೇಷ್ಮೆ ಆಮದು ಶುಲ್ಕವನ್ನು ಶೇ.10ಕ್ಕೆ ಕೇಂದ್ರ ಸರ್ಕಾರವೂ ಇಳಿಸಿದ್ದು, ರೇಷ್ಮೆ ಬೆಲೆ ಇಳಿಯಲು ಕಾರಣವಾಗಿದೆ. ರಾಜ್ಯದಲ್ಲಿ 1.60 ಲಕ್ಷ ರೇಷ್ಮೆ ಬೆಳೆಗಾರರಿದ್ದು 40 ಸಾವಿರಕ್ಕೂ ಹೆಚ್ಚು ರೇಷ್ಮೆ ನೂಲು ಬಿಚ್ಚಣಿಕೆದಾರರ ಕುಟುಂಬಗಳಿವೆ.
ಇವರ ಬಗ್ಗೆ ಚಿಂತನೆ ನಡೆಸದೇ ರೇಷ್ಮೆ ಆಮದು ಶುಲ್ಕವನ್ನು ಇಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ರೇಷ್ಮೆ ಅಮದು ಸುಂಕವನ್ನು ಹೆಚ್ಚಿಸಬೇಕು. ದೇಶದ ಅನ್ನದಾತನಾದ ರೈತನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು ಎಂದು
ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಯಲುವಳ್ಳಿ ರಮೇಶ್, ರು.400 ಇದ್ದಂತಹ ಗೂಡಿನ ಬೆಲೆಯೂ ರು.220 ರಿಂದ ರು.270ಕ್ಕೆ ಇಳಿಕೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಪ್ರತಿಭಟನೆ ನಂತರ ಉಪನಿರ್ದೇಶಕ ದಾದನೂರು ಅವರಿಗೆ ಮನವಿ ಸಲ್ಲಿಸಲಾಯಿತು. ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾಗಿ ರಸ್ತೆ ತಡೆ ನಡೆಸಲು ಪ್ರಯತ್ನಿಸಿದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ