ಬೆಂಗಳೂರು: ಸರ್ಕಾರಿ ಜಾಹೀರಾತಿನಲ್ಲಿ ರಾಜಕಾರಣಿಗಳ ಭಾವಚಿತ್ರ ನಿಷೇಧಿಸಿರುವ ತೀರ್ಪನ್ನು ಸುಪ್ರೀಂಕೋರ್ಟ್ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ನಲ್ಲಿ ಮರು ಪರಿಶೀಲನೆ ಅರ್ಜಿ ಸಲ್ಲಿಸಬೇಕು. ಇಲ್ಲವೇ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಇದನ್ನು ತಡೆಯಬೇಕೆಂದು ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಸರ್ಕಾರಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಭಾವಚಿತ್ರವನ್ನು ಮಾತ್ರ ಪ್ರಕಟಿಸಿದರೆ ಅದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ. ಹಾಗೆಯೇ ದೇಶದ ಒಕ್ಕೂಟ ವ್ಯವಸ್ಥೆಗೂ ಧಕ್ಕೆಯಾಗಲಿದೆ. ಆದ್ದರಿಂದ ಸುಪ್ರೀಂಕೋರ್ಟ್ ಈ ತೀರ್ಪನ್ನು ಪುನರ್ಪರಿಶೀಲಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಜಾಹೀರಾತಿನಲ್ಲಿ ಭಾವಚಿತ್ರ ಪ್ರಕಟಿಸುವ ಸಂಬಂಧ ರಚಿಸಿದ್ದ ಮಾಧವನ್ ಸಮಿತಿ ವರದಿ ಪ್ರಕಾರ ಸರ್ಕಾರದ ಜಾಹೀರಾತುಗಳಲ್ಲಿ ಯಾವುದೇ ರಾಜಕಾರಣಿಗಳು ಮತ್ತು ಗಣ್ಯರ ಭಾವಚಿತ್ರ ಹಾಕುವಂತಿಲ್ಲ. ಹೀಗಿರುವಾಗ ರಾಷ್ಟ್ರಪತಿಯಾಗಲಿ, ಪ್ರಧಾನಿ ಭಾವಚಿತ್ರಗಳನ್ನೇಕೆ ಹಾಕಬೇಕು ? ಅಷ್ಟೇ ಏಕೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಭಾವಚಿತ್ರವನ್ನಾದರೂ ಏಕೆ ಪ್ರಕಟಿಸಬೇಕು? ಆದ್ದರಿಂದ ಈ ನಿಯಮವನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರಿ ಜಾಹೀರಾತಿನಲ್ಲಿ ಯಾವ ಗಣ್ಯರ ಭಾವಚಿತ್ರವನ್ನೂ ಹಾಕದಂತೆ ಮಾಡಬೇಕು ಎಂದು ಉಗ್ರಪ್ಪ ವಾದಿಸಿದರು. ಮುಖ್ಯ ಸಚೇತಕ ಪಿ.ಎಂ. ಅಶೋಕ್ ಹಾಜರಿದ್ದರು.
ಕಳ್ಳ ಲಾಟರಿ ಮಾಫಿಯಾವನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ಬಗ್ಗೆ ನನ್ನಲ್ಲಿ ಮಾಹಿತಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಇದ್ದಾಗ್ಯೂ, ಸಂಬಂಂಧಿಸಿದ ಇಲಾಖೆಗೆ ತಿಳಿಸದೆ ಮುಚ್ಚಿಡುವುದು ಅಪರಾಧ. ಲಾಟರಿ ದಂಧೆಯಿಂದ ಯಾರಿಗೆ ಎಷ್ಟೆಲ್ಲ ಹಣ ಹೋಗಿದೆ ಎಂದು ಕುಮಾರಸ್ವಾಮಿ ಹೇಳುವುದಾದರೆ ಅವರು ಅಧಿಕಾರದಲ್ಲಿದ್ದಾಗ ಇದು ನಡೆಯುತ್ತಿದ್ದಂತೆ ಕಾಣುತ್ತದೆ. ಈ ಅನುಭವದಲ್ಲಿಯೇ ಅವರು ಆರೋಪಿಸಿದ್ದಾರೆ.
ವಿ.ಎಸ್.ಉಗ್ರಪ್ಪ
ವಿಧಾನಪರಿಷತ್ ಸದಸ್ಯ
Advertisement