ಬೆಂಗಳೂರು: ಆಕೆ ಸಾಧಿಸಿದ್ದಾಳೆ. ಹೇಳಿದಂತೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾಳೆ. ಪಾಲಕರಿಗೆ ಕೊಟ್ಟ ವಚನದಂತೆ ತಾನು ಪ್ರತಿಭಾನ್ವಿತೆ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಆದರೆ. ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಪಾಲಕರಿಲ್ಲ. ತನ್ನ ಅಂಕ ತೋರಿಸಲು ಆಕೆಯೂ ಭೂಮಿ ಮೇಲಿಲ್ಲ!
ಕಳೆದ ತಿಂಗಳು ಶೂಟೌಟ್ಗೆ ಬಲಿಯಾದ ಬೆಂಗಳೂರಿನ ಪ್ರಗತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್.ಗೌತಮಿ ಕತೆ ಇದು.
ಕಾಲೇಜಿನ ವಸತಿಗೃಹದಲ್ಲಿ ಶವವಾಗಿ ಬಿದ್ದಿದ್ದಾಗ ಆಕೆಯ ಮೇಲೆ ಇಲ್ಲಸಲ್ಲದ ಕತೆ ಕಟ್ಟಲಾಗಿತ್ತು. 'ನನ್ನ ಮಗಳು ಅಂಥವಳಲ್ಲ. ಅವಳ ಹೆಸರು ಕೆಡಿಸುವ ಕೆಲಸ ಮಾಡಬೇಡಿ. ಫಲಿತಾಂಶ ಬಂದ ಕೂಡಲೇ ನಿಮಗೆ ಗೊತ್ತಾಗುತ್ತದೆ. ಕಾದು ನೋಡಿ' ಎಂದು ಆಕೆಯ ತಂದೆ ಹಾಗೂ ಕುಟುಂಬ ಸದಸ್ಯರು ಅಂಗಲಾಚಿಕೊಂಡಿದ್ದರು. ಅವರ ಮಾತು ಈಗ ನಿಜವಾಗಿದೆ. ಮಹೇಶ ಎಂಬ ಅಟೆಂಡರ್ನಿಂದ ಕೊಲೆಯಾಗಿದ್ದ ಗೌತಮಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.78.67 ಅಂಕ ಪಡೆದಿದ್ದಾಳೆ.
ವೈದ್ಯೆಯಾಗುವ ಕನಸು ಹೊತ್ತು ಬೆಂಗಳೂರಿಗೆ ಓದಲು ಬಂದಿದ್ದ ಗೌತಮಿ ಜೀವಶಾಸ್ತ್ರದಲ್ಲಿ 95 ಅಂಕ ಪಡೆದಿದ್ದಾಳೆ. ಉಳಿದ ವಿಷಯಗಳಲ್ಲೂ ಪ್ರಥಮ ದರ್ಜೆ ಅಂಕ ಗಳಿಸಿದ್ದಾಳೆ. ಗೌತಮಿ ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿನಿಯಾದರೂ ಇಂಗ್ಲಿಷ್ನಲ್ಲಿ ಉನ್ನತ ಶ್ರೇಣಿಯ ಅಂಕ ಪಡೆದಿದ್ದಾಳೆ.
Advertisement