ಬೆಂಗಳೂರು: `ಇಲ್ಲಿ ಖಾಸಗಿ ಬಿಲ್ಡರ್ಗಳಿಂದ ರಾಜಕಾಲುವೆ ಒತ್ತುವರಿಯಾಗಿದೆ. ಕೆರೆಯಲ್ಲಿ ನೀರು ಸರಾಗವಾಗಿ ಹರಿಯದೇ ಇರುವುದರಿಂದ ಕೋಡಿಯ ಒತ್ತಡ ಹೆಚ್ಚುತ್ತಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡುವುದರ ಜೊತೆಗೆ ಕೆರೆಯಲ್ಲಿ ಉತ್ಪತ್ತಿಯಾಗುವ ನೊರೆಯ ಮಾಲಿನ್ಯದ ಸಮಸ್ಯೆಯನ್ನೂ ಪರಿಹರಿಸಿ'.
ಕೆರೆ ಒತ್ತುವರಿ ಸದನ ಸಮಿತಿ ಬುಧವಾರ ಬೆಳ್ಳಂದೂರು ಕೆರೆಯ ಯಮಲೂರು ಕೋಡಿಗೆ ಭೇಟಿ ನೀಡಿದ ವೇಳೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. `ಯಮಲೂರು ಕೋಡಿಯಲ್ಲಿ ಈಚೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸಮೀ ಪದಲ್ಲಿರುವ ನಿವಾಸಿಗಳು ಬಿsೀತಿಗೊಳಗಾಗಿದ್ದರು. ಕೆರೆ ಪೂರ್ಣ ಮಲಿನಗೊಂಡಿದ್ದು, ಶೀಘ್ರವಾಗಿ ಸ್ವಚ್ಛಗೊಳಿಸಬೇಕು' ಎಂದು ಸ್ಥಳೀಯರು ಆಗ್ರಹಿಸಿದರು.
`ಜಿಲ್ಲಾಡಳಿತ ಒತ್ತುವರಿ ತೆರವು ಮಾಡಿದರೆ ಕೆರೆ ನೀರು ಸರಾಗವಾಗಿ ಹರಿಯಲಿದೆ. ನಂತರ ಬಿಡಿಎ ಹಾಗೂ ಬಿಬಿಎಂಪಿ ಕೆರೆ ಸ್ವಚ್ಛ ಮಾಡಬೇಕು. ಕೆರೆಗೆ ಕೈಗಾರಿಕೆಯ ತ್ಯಾಜ್ಯ ನೀರು ಸೇರದಂತೆ ಕ್ರಮ ಕೈಗೊಂಡು ನೀರನ್ನು ಸ್ವಚ್ಛಗೊಳಿಸುವಂತೆ ರಾಜ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗುವುದು. ಆದರೆ, ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು. ಕ್ರಮ ಕೈಗೊಂಡ ವರದಿಯನ್ನು ಮುಂದಿನ ಸಮಿತಿ ಸಭೆಯಲ್ಲಿ ತಿಳಿಸಬೇಕು' ಎಂದು ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಬಿಬಿಎಂಪಿ ಎಂಜಿನಿಯರ್ ರವಿಶಂಕರ್ ಹಾಗೂ ತಹಸೀಲ್ದಾರ್ ಡಾ.ಹರೀಶ್ ನಾಯ್ಕ್ ಅವರಿಗೆ ಸೂಚನೆ ನೀಡಿದರು.
ಮೈಸೂರು ರಾಜರಿಂದ ಖರೀದಿ
ಸ್ಯಾಂಕಿ ಕೆರೆಗೆ ಭೇಟಿ ನೀಡಿದ ಸಮಿತಿ ಸದಸ್ಯರನ್ನು ಭೇಟಿಯಾದ ಸ್ಥಳೀಯ ಶ್ರೀನಿವಾಸ್, `ಸ್ಯಾಂಕಿ ಕೆರೆಗೆ ಹತ್ತಿರದಲ್ಲೇ 10.31 ಎಕರೆ ಜಾಗವನ್ನು ಮೈಸೂರು ಮಹಾರಾಜರಲ್ಲಿ ದಿವಾನರಾಗಿದ್ದ ತಮ್ಮ ತಂದೆ ಎಂ.ಎ. ಶ್ರೀನಿವಾಸ್ 1950ರಲ್ಲಿ ಖರೀದಿಸಿದ್ದರು. ಇದರಲ್ಲಿ 1.6 ಎಕರೆ ಒತ್ತುವರಿ ಎಂದು ಜಿಲ್ಲಾಡಳಿತ ಹೇಳಿದ್ದು, ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದಾಗ ಸರ್ವೆ ಮಾಡುವಂತೆ ಆದೇಶಿಸಲಾಗಿತ್ತು. ಸರ್ವೆಯಲ್ಲಿ ಗೊಂದಲವಾಗಿದ್ದು, ತಪ್ಪು ಮಾಹಿತಿ ದಾಖಲಾಗಿದೆ. ಭೂಮಿ ಉಳಿಸಿಕೊಡಬೇಕು' ಎಂದರು. ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೋಳಿವಾಡ ತಿಳಿಸಿದರು.
ಕೊಳಗೇರಿ ಜನರ ಮನವಿ
15.37 ವಿಸ್ತೀರ್ಣದ ಕೌದೇನಹಳ್ಳಿ ಕೆರೆ ಸಂಪೂರ್ಣ ಒತ್ತುವರಿಯಾಗಿದ್ದು, ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಕೊಳಗೇರಿ ನಿವಾಸಿಗಳು ಸಮಿತಿ ಸದಸ್ಯರಿಗೆ ಮನವಿ ಮಾಡಿದರು. ಕೊಳಗೇರಿಯಲ್ಲಿ ಸಾವಿರಕ್ಕೂ ಅಧಿಕ ಮನೆಗಳಿವೆ. ಬಡಜನರು ವಾಸಿಸುತ್ತಿರುವುದರಿಂದ ಒಕ್ಕಲೆಬ್ಬಿಸಬಾರದು ಎಂದು ಸ್ಥಳೀಯರು ಕೋರಿದರು.
ಮೂಗು ಮುಚ್ಚಿಕೊಂಡರು!
ಬೆಳ್ಳಂದೂರು ಕೆರೆಯ ಎರಡು ಭಾಗಗಳಿಗೆ ಭೇಟಿ ನೀಡಿದಾಗ ಸಮಿತಿ ಸದಸ್ಯರು ಸೇತುವೆ ಮೇಲೆ ನಿಂತಾಗ ಬೃಹದಾಕಾರದಲ್ಲಿ ನೊರೆ ರಾಶಿ ನೋಡಿ ದುರ್ವಾಸನೆಗೆ ಮೂಗು ಮುಚ್ಚಿಕೊಂಡರು.
ಜೂನ್ 9ಕ್ಕೆ ಸಭೆ
ಕೆರೆ ಒತ್ತುವರಿ ಪತ್ತೆ ಸದನ ಸಮಿತಿ 2ನೇ ದಿನ ಪರೀಶೀಲನೆ ಕೈಗೊಂಡು 9 ಕೆರೆಗಳಿಗೆ ಭೇಟಿ ನೀಡಿತು. 17 ಕೆರೆಗಳಿಗೆ ಭೇಟಿ ನೀಡಿ ಮಾಹಿತಿ ಕ್ರೋಡೀಕರಿಸಿದ್ದು, 28 ಕೆರೆಗಳ ಬಗ್ಗೆ ಮಾಹಿತಿ ಕಲೆಹಾಕಲು ನಿರ್ಧರಿಸಲಾಗಿದೆ. ಜೂ.9ರಂದು ಸಮಿತಿಯ ಸಭೆ ನಡೆಯಲಿದೆ. ಬಳಿಕ ಮಧ್ಯಂತರ ವರದಿ ಸಿದಟಛಿಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದೆ.
ಎಲ್ಲ ನೀವೇ ನಿರ್ಧರಿಸುತ್ತೀರಾ?
ಕೌದೇನಹಳ್ಳಿ, ವಿಜಿನಾಪುರ, ಬಿ.ನಾರಾಯಣಪುರ, ಚನ್ನಸಂದ್ರ ಕೆಲವು ಕೆರೆಗಳಿಗೆ ಭೇಟಿ ನಿಡಿದಾಗ ಬಿಡಿಎ ಆಯುಕ್ತ ಶ್ಯಾಮ್ ಭಟ್, ಇತರ ಅಧಿಕಾರಿಗಳು ಪದೇ ಪದೇ ಒತ್ತುವರಿ ತೆರವು ಸಾಧ್ಯವಿಲ್ಲ ಎನ್ನುತ್ತಿದ್ದರು. ಇದ್ದಕ್ಕೆ ಸದಸ್ಯ ಸುರೇಶ್ಕುಮಾರ್ ಆಕ್ರೋಶ ವ್ಯಕ್ತಪಡಿಸಿ, `ಎಲ್ಲವನ್ನೂ ನೀವೇ ನಿರ್ಧರಿಸಿ ಬಿಡ್ತೀರಾ' ಎಂದು ಪ್ರಶ್ನಿಸಿದರು.
Advertisement