ಮಳೆ ಹಾನಿ ಪ್ರದೇಶಗಳತ್ತ ಹಾಲಿ, ಮಾಜಿಗಳ ದೌಡು; ಆದರೂ ಜನತೆಗೆ ಸಿಕ್ಕಿದ್ದು ಭರವಸೆ ಮಾತ್ರ!
ದೊಡ್ಡಬಳ್ಳಾಪುರ: ಬಿರುಗಾಳಿ, ಮಳೆಯಿಂದ ಸಾಕಷ್ಟು ಹಾನಿಗೊಳಗಾಗಿರುವ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ತೂಬುಕುಂಟೆ, ಕತ್ತಿಹೊಸಹಳ್ಳಿ, ಹುಲಿಕುಂಟೆ ಸೇರಿದಂತೆ ಹಲವು ಗ್ರಾಮಗಳಿಗೆ ಹಾಲಿ ಶಾಸಕ ಕಾಂಗ್ರೆಸ್ನ ಟಿ.ವೆಂಕಟರಮಣಯ್ಯ ಮತ್ತು ಮಾಜಿ ಶಾಸಕ ಬಿಜೆಪಿಯ ಜೆ.ನರಸಿಂಹಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳು ತಂಡೋಪತಂಡವಾಗಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದ್ದಾರೆ.
ತಾಲೂಕಿನ ಹುಲಿಕುಂಟೆ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳಲ್ಲಿ ಮಳೆಯಿಂದ ಅಪಾರ ನಷ್ಟ ಸಂಭವಿಸಿತ್ತು. ಬಿರುಗಾಳಿಗೆ ನೂರಾರು ಮನೆಗಳ ಚಾವಣಿಗಳು ಹಾರಿ ಹೋಗಿದ್ದವು. 500ಕ್ಕೂ ಹೆಚ್ಚು ತೆಂಗು ಮತ್ತು ಅಡಿಕೆ ಮರಗಳು ನೆಲಕ್ಕುರುಳಿದ್ದವು. ಹತ್ತಾರು ವಿದ್ಯುತ್ ಕಂಬಗಳು ಜಖಂಗೊಂಡಿದ್ದ ವು. ಗುಡಿಸಲುಗಳು ಹಾನಿಗೊಳಗಾಗಿದ್ದವು. ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಕೂಡ ಹಾನಿಗೊಳಗಾಗಿದ್ದವು.
ಸಾಂತ್ವನವೊಂದೇ ಬಂದ ಭಾಗ್ಯ: ಅವರೂ ಬಂದರು, ಇವರೂ ಬಂದರು. ಆದರೆ ಸಾಂತ್ವನವೊಂದೇ ನಮಗೆ ಬಂದ ಭಾಗ್ಯ ಸ್ವಾಮಿ, ಹಾರಿ ಹೋದ ಚಾವಣಿ ನಾವೇ ಹಾಕಿಸ್ಕೋಬೇಕಲ್ಲ, ಪಂಚಾಯಿತಿಯವರೂ ಈಗ ಪರಿಹಾರ ಕೊಡಲ್ವಂತೆ. ಬೇರೆಯವ್ರೂ ಕೊಡೋಕಾಗಲ್ಲ. ಪಂಚಾಯಿತಿ ಚುನಾವಣೆ ಇರೋದ್ರಿಂದ ಯಾವ ನೆರವೂ ಸಿಕ್ತಿಲ್ಲ. ಇನ್ನು ಪರಿಹಾರಕ್ಕೆ ಇಷ್ಟು ಸತಾಯಿಸ್ತಾರೋ ಗೊತ್ತಿಲ್ಲ.
ನಮ್ಮ ಕಷ್ಟ ನಾವೇ ಅನುಭವಿಸ್ತಿದ್ದೀವಿ. ಯಾರು ಬಂದ್ರು ಅಷ್ಟೇ ಎಂಬುದು ಸಂಕಷ್ಟಕ್ಕೊಳಗಾದ ರೈತನೊಬ್ಬನ ಮಾತು. ಹಲವು ಗ್ರಾಮಗಳಲ್ಲಿ ನಷ್ಟಕ್ಕೊಳಗಾಗಿರುವ ಮನೆಗಳಿಗೆ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಸಿ. ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖರು ಗುರುವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ