ಸೋಲಿನ ಭೀತಿ: ಅಭ್ಯರ್ಥಿಗಳಿಂದ ಮಾಟ ಮಂತ್ರ
ಬೆಂಗಳೂರು: ಜೋಯಿಡಾ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಗೆಲವಿಗಾಗಿ ಮಾಟ ಮಾಡಿಸುತ್ತಿದ್ದ ಮೂವರನ್ನು ಗುರುವಾರ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಜೀರ ಅಹ್ಮದ್ ಮದರಸಾ ಮುಲ್ಲಾ, ರಾಣಿಬೆನ್ನೂರು (67) ಕಾರವಾರ ಕೋಡಿಬಾಗದ ಜಗನ್ನಾಥ ವಿಷ್ಣು ರೇವಂಡಿಕರ (60) ಹಾಗೂ ದೇವಾನಂದ ನಾರಾಯಣ ನಾಯ್ಕ (49) ಬಂಧಿತರು. ಇವರು ಮಾಟ ಮಾಡುವವರೊಂದಿಗೆ ಬಂದು ತಾಲೂಕು ಕೇಂದ್ರದ ನಗರಿ, ಮೆಸ್ತಬಿರೋಡಾ ಮತ್ತಿತರ ಕಡೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರಲು ವಾಮಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುವಾರ ಮಧ್ಯಾಹ್ನ 11.30ರ ಸುಮಾರಿಗೆ ಮೆಸ್ತಬಿ ರೋಡಾದ ಬಳಿಯ ಸ್ಮಶಾನದಲ್ಲಿ ಮಾಟ ಮಾಡಿಸುತ್ತಿದ್ದ ಈ ಮೂವರ ತಂಡ ಸಾರ್ವಜನಿಕರ ಕಣ್ಣಿಗೆ ಬಿದ್ದಾಗ ಇವರನ್ನು ಹಿಡಿದ ಸಾರ್ವಜನಿಕರು ಮತ್ತು ಜೋಯಿಡಾ ಗ್ರಾಪಂಗೆ ಸ್ಪರ್ಥಿಸಿದ ಅಭ್ಯರ್ಥಿಗಳು ಪೊಲೀಸರಿಗೆಒಪ್ಪಿಸಿದ್ದಾರೆ. ಠಾಣೆಯಲ್ಲಿ ಇವರನ್ನು ವಿಚಾರಿಸಿದಾಗ ಸತ್ಯ ಬಾಯಿಬಿಟ್ಟಿದ್ದು ಆರೋಪಿತರು ಚುನಾವಣೆ ಗೆಲ್ಲುವ ಸಲುವಾಗಿ ವಾಮಾಚಾರಕ್ಕಾಗಿ ಕೆಲ ಅಭ್ಯರ್ಥಿಗಳು ಕರೆಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ತಾಲೂಕಿನ ರಾಮನಗರ, ಕುಂಬಾರವಾಡಾ, ನಂದಿಗದ್ದೆ, ಅಣಶಿ, ಅಖೇತಿ ಸೇರಿದಂತೆ ಅನೇಕ ಕಡೆ ಈ ತಂಡ ಸೋಲಿನ ಭೀತಿ ಇರುವ ಅಭ್ಯರ್ಥಿಗಳಿಂದ ಲಕ್ಷಾಂತರ ರುಪಾಯಿ ಪಡೆದು ವಾಮಾಚಾರ ಮಾಡಿ ತಮ್ಮನ್ನು ಕರೆಸಿದ ವ್ಯಕ್ತಿಗಳಿಗೆ ಗೆಲ್ಲುವ ಭರವಸೆ ನೀಡಿರುವುದೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ತಾಲೂಕು ಕೇಂದ್ರಕ್ಕೆ ನೀರು ಪೂರೈಸುವ ಹುಡಸಾ, ಜನತಾ ಕಾಲಿನಿ ಟ್ಯಾಂಕ್ಗಳಲ್ಲಿ ವಾಮಾಚಾರದ ವಸ್ತುಗಳನ್ನು ಹಾಕಲಾಗಿದೆ ಎಂದು ಜನತೆ ತಿಳಿಸಿದ್ದಾರೆ. ಹುಡಸಾ ನೀರಿನ ಟ್ಯಾಂಕ್ ಬಳಿ ಲಿಂಬೆಹಣ್ಣು ಬಿದ್ದಿರುವುದು, ವಾಮಾಚಾರಕ್ಕೆ ಕಬ್ಬಿಣದ ಮೊಳೆಗಳು, ತೆಂಗಿನಕಾಯಿ ಇತರ ಸಾಮಗ್ರಿಗಳನ್ನು ಬಳಸಲಾಗಿದೆ. ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ