ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಯಾವುದೇ ಭಯವಿಲ್ಲದೆ ಆಡಿ ನಲಿದ ಚಿಣ್ಣರು
ಬೆಂಗಳೂರು: ಕಬ್ಬನ್ ಪಾರ್ಕ್ನಲ್ಲಿ ಕಳೆದ ಭಾನುವಾರ ಪ್ರಾಯೋಗಿಕವಾಗಿ ಜಾರಿಗೆ ತಂದ `ವಾಹನ ಸಂಚಾರ ನಿಷೇಧ'ಕ್ಕೆ ಈ ವಾರ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆ ಜಾಗಿಂಗ್ ಹೋಗುವ ಯುವಕರಿಂದ ಸಂಜೆ ವಾಕಿಂಗ್ ಗೆ ಹೋಗುವ ವೃದ್ಧರ ಮುಖದಲ್ಲೂ ನೆಮ್ಮದಿಯಿತ್ತು. ಇಷ್ಟು ದಿನ ಕೇವಲ ಉದ್ಯಾನದೊಳಗೆ ಅಥವಾ ಹೊರಗೆ ಪಾದಚಾರಿ ಮಾರ್ಗದಲ್ಲೇ ಚಲಿಸಬೇಕಾಗಿತ್ತು. ದಾರಿ ಕೂಡ ಕಿರಿದಾಗಿರುವುದರಿಂದ ರಸ್ತೆಯಲ್ಲಿ ಓಡಾಡುವುದೂ ಕಷ್ಟವಾಗಿತ್ತು. ಆದರೆ ಇಂದು ಎಲ್ಲಾ ಕಡೆಯೂ ನೆಮ್ಮದಿ ವಾತಾವರಣವಿತ್ತು. ಪೋಷಕರು ತಮ್ಮ ಮಕ್ಕಳನ್ನೂ ಪ್ರತಿ ಭಾನುವಾರ ಪಾರ್ಕ್ ಗಳಿಗೆ ಅಜ್ಜ-ಅಜ್ಜಿಯೊಡನೆ ಕಳಿಸಲು ಹಿಂಜರಿಯುತ್ತಿದ್ದರು.
ಒಂದೊಮ್ಮೆ ಮಕ್ಕಳೊಂದಿಗೆ ಅವರಿಗೆ ಹೆಜ್ಜೆ ಹಾಕಲು ಆಗದಿದ್ದರೆ ಏನಾದರೂ ಅನಾಹುತಗಳಾದರೆ ಎಂಬ ಭಯವಿತ್ತು. ಆದರೆ, ಭಾನುವಾರ ಆ ಮಾತು ಸುಳ್ಳಾಗಿತ್ತು. ಅಜ್ಜ-ಅಜ್ಜಿಯೊಡನೆ ಮಕ್ಕಳು ಬಂದಿದ್ದರು, ಸಂತೋಷದಿಂದ ಕುಣಿದಾಡುತ್ತಿದ್ದರು. ತಮಗೆ ಬೇಕಾದ ತಿನಿಸು, ಆಟಿಕೆಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದ ದೃಶ್ಯಗಳು ಕಂಡುಬಂದವು.
ರಾತ್ರಿ 10ರವರೆಗೂ ಬಿಗಿ ಭದ್ರತೆಯಿರುವ ಕಾರಣ ಸಂಜೆಯಾಗುವವರೆಗೂ ಮನ ಬಂದಷ್ಟು ಹೊತ್ತು ಆಟವಾಡಿದ್ದರು. ವಾರಪೂರ್ತಿ ವಾಹನಗಳ ಧ್ವನಿ ಮಧ್ಯೆ ಕೇಳಿಬರುತ್ತಿದ್ದ ಹಕ್ಕಿಗಳ ಕೂಗುವ ಸದ್ದು ಇಂದು ಸ್ಪಷ್ಟವಾಗಿ ಕೇಳುತ್ತಿತ್ತು. ವಾಯು, ಶಬ್ದಮಾಲಿನ್ಯವನ್ನು ದಿನದ ಮಟ್ಟಿಗಾದರೂ ಕಡಿಮೆ ಮಾಡುವ ಆಲೋಚನೆಯಿಂದ ಭಾನುವಾರ ಒಂದು ದಿನ ಕಬ್ಬನ್ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಕ್ಕಳು, ವೃದ್ಧರು ಎಲ್ಲರೂ ವಾಹನಗಳ ಭೀತಿಯಿಲ್ಲದೆ ಉದ್ಯಾನದಲ್ಲಿ ಸಂಚರಿಸಿದರು.
ವಾಹನ ನಿಲುಗಡೆಗೆ ವ್ಯವಸ್ಥೆ
ಭಾನುವಾರ ಕಬ್ಬನ್ ಪಾರ್ಕ್ ವೀಕ್ಷಣೆಗೆ ಬಂದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಕಿಂಗ್ಸ್ ರಸ್ತೆಯಲ್ಲಿ, ಬಾಲಭವನ ರಸ್ತೆ ಜಂಕ್ಷನ್ನಿಂದ ಕಿಂಗ್ ಎಡ್ವರ್ಡ್ ಪ್ರತಿಮೆವರೆಗಿನ ರಸ್ತೆಯ ಪೂರ್ವದ ಕಡೆಗೆ ನಿಲುಗಡೆ ಮಾಡಿದ್ದರು.ಅದೇ ರೀತಿ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬರುವ ಬಸ್, ಟೆಂಪೋ ಟ್ರಾವೆಲ್ಲರ್ಸ್, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳನ್ನು ಕಸ್ತೂರಿಬಾ ರಸ್ತೆಯ ಕಡೆಯಿಂದ ಸರ್ ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಪ್ರವೇಶ ದ್ವಾರದ ಮುಖೇನ ಒಳ ಸಾಗಿ, ಸದರಿ ಮ್ಯೂಸಿಯಂನ ಹಿಂಭಾಗದ ಪ್ರವೇಶವಾದ ಕಬ್ಬನ್ಪಾರ್ಕ್ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿ, ಅದೇ ದ್ವಾರದಿಂದ ಕಸ್ತೂರ್ಬಾ ರಸ್ತೆ ಮೂಲಕ ನಿರ್ಗಮಿಸಲು ವ್ಯವಸ್ಥೆ ಮಾಡಲಾಗಿತ್ತು. ದ್ವಿಚಕ್ರವಾಹನಗಳಿಗೆ ರು.10 ಹಾಗೂ ನಾಲ್ಕು ಚಕ್ರವಾಹನಗಳಗೆ ರು.20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಎಂಜಿ ರಸ್ತೆಯಿಂದ ಶಾರ್ಟ್ಕಟ್ನಲ್ಲಿ ವಾಹನಗಳು ಬಾಲಭವನ ಮಾರ್ಗವಾಗಿ ಉದ್ಯಾನಕ್ಕೆ ಹೋಗುತ್ತಿತ್ತು. ಆದ ಕಾರಣ ಅಲ್ಲಿರುವ ಎರಡೂ ಗೇಟ್ಗಳಲ್ಲಿ ಮುಚ್ಚಲಾಗಿದ್ದು, ಈಗ ಪ್ರೆಸ್ಕ್ಲಬ್ನ ದಾರಿಯಲ್ಲೇ ಸಾಗುವಂತೆ ಮಾಡಿದ್ದೇವೆ. ಜನರು ಸುರಕ್ಷತೆ ಬಗ್ಗೆ ಹೆದರಬೇಕಾಗಿಲ್ಲ. ಸಂಜೆ 10ರವರೆಗೂ ಓಡಾಡಬಹುದು ಪೊಲೀಸ್ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ.
-ಮಹಾಂತೇಶ್ ಮುರಗೋಡ್
ಉಪನಿರ್ದೇಶಕ, ತೋಟಗಾರಿಕೆ ಇಲಾಖೆ.
ಎಂಜಿ ರಸ್ತೆಯಿಂದ ಶಾರ್ಟ್ಕಟ್ನಲ್ಲಿ ವಾಹನಗಳು ಬಾಲಭವನ ಮಾರ್ಗವಾಗಿ ಉದ್ಯಾನಕ್ಕೆ ಹೋಗುತ್ತಿತ್ತು. ಆದ ಕಾರಣ ಅಲ್ಲಿರುವ ಎರಡೂ ಗೇಟ್ಗಳಲ್ಲಿ ಮುಚ್ಚಲಾಗಿದ್ದು, ಈಗ ಪ್ರೆಸ್ಕ್ಲಬ್ನ ದಾರಿಯಲ್ಲೇ ಸಾಗುವಂತೆ ಮಾಡಿದ್ದೇವೆ. ಜನರು ಸುರಕ್ಷತೆ ಬಗ್ಗೆ ಹೆದರಬೇಕಾಗಿಲ್ಲ. ಸಂಜೆ 10ರವರೆಗೂ ಓಡಾಡಬಹುದು ಪೊಲೀಸ್ ಸಿಬ್ಬಂದಿ ಭದ್ರತೆ ನೀಡಲಿದ್ದಾರೆ.
-ಮಹಾಂತೇಶ್ ಮುರಗೋಡ್
ಉಪನಿರ್ದೇಶಕ, ತೋಟಗಾರಿಕೆ ಇಲಾಖೆ.
ಮಳೆಯಿಂದ ತೊಂದರೆ
ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನ ಸ್ವಲ್ಪ ಕಂಗಾಲಾಗಿದ್ದರು. ಕೆಲವರು ಕಾರು ಗಳಲ್ಲಿ ಆಶ್ರಯ ಪಡೆದರೆ ಇನ್ನು ಕೆಲವರು ಕಬ್ಬನ್ ಉದ್ಯಾದಲ್ಲಿ ನಿರ್ಮಿಸಲಾದ ವಿಶ್ರಾಂತಿ ಕೊಠಡಿಯಲ್ಲಿ ಆಶ್ರಯ ಪಡೆದರು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿ ಪ್ರವೇಶ ದ್ವಾರಗಳ ಬಳಿ ನಿಂತು ಸಂಚಾರ ಮುಕ್ತಕ್ಕೆ ಸಹಕರಿಸಿದರು. ಸಂಚಾರ ಪೊಲೀಸರೂ ಪ್ರವೇಶ ದ್ವಾರಗಳ ಮುಂಭಾಗದಲ್ಲಿಯೇ ನಿಂತು ಒಂದೂ ವಾಹನ ಪ್ರವೇಶಿಸಿದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿತ್ತಿದ್ದರು.
ಯಾವ ಗೇಟ್ನಿಂದ ವಾಹನ ನಿಷೇಧ?
ಹಡ್ಸನ್ ಸರ್ಕಲ್ ಗೇಟ್, ಸಿದ್ದಲಿಂಗಯ್ಯ ಗೇಟ್, ಬಾಲಭವನ ಗೇಟ್, ಪ್ರೆಸ್ಕ್ಲಬ್ ಗೇಟ್, ಎಂ.ಎಸ್. ಬಿಲ್ಡಿಂಗ್ ಗೇಟ್, ಹೈಕೋರ್ಟ್ ಗೇಟ್ ಹಾಗೂ ಕೆ.ಆರ್. ಸರ್ಕಲ್ ಗೇಟ್ ಹೀಗೆ
ಏಳು ಪ್ರವೇಶ ದ್ವಾರಗಳಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಈ ಎಲ್ಲ ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ನಿರ್ಬಂಧಿಸಿ, ಬ್ಯಾರಿಕೇಡ್ಗಳನ್ನು ಮತ್ತು ಸಾರ್ವಜನಿಕರಿಗೆ ಸೂಚನೆ ನೀಡುವ
ಮಾಹಿತಿ ಫಲಕಗಳನ್ನು ಅಳವಡಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸವಾರರು ಸಾಗುವಂತೆ ಸೂಚಿಸಲಾಗುತ್ತಿತ್ತು.
ಕಳೆದ ವಾರಕ್ಕಿಂತ ಹೆಚ್ಚು ಸಾರ್ವಜನಿಕರು ಬಂದಿದ್ದ ಕಾರಣ ವಾಹನಗಳಿದ್ದು ನಿಲುಗಡೆಗೆ ಸ್ವಲ್ಪ ತೊಂದರೆಯಾಗಿತ್ತು. ಬಾಲಭವನದ ಎದುರು ಎರಡೂ ಗೇಟ್ಗಳಲ್ಲಿ ಪ್ರತಿನಿತ್ಯಕ್ಕಿಂತ ಎರಡು ಪಟ್ಟು ಹೆಚ್ಚು ವ್ಯಾಪಾರಿಗಳಿದ್ದರು. ತಿನಿಸು ಹಾಗೂ ಆಟಿಕೆಗಳ ಮಾರಾಟವಿತ್ತು. ಬಾಲಭವನದಲ್ಲೂ ಕೂಡ ಪೊಷಕರು ತಮ್ಮ ಮಕ್ಕಳೊಡನೆ ಹೆಚ್ಚು ಸಮಯ ಕಳೆದರು. ಕಬ್ಬನ್ ಠಾಣೆ ಮತ್ತು ಸಂಚಾರ ಪೊಲೀಸರು ಜತೆಗೆ ಖಾಸಗಿ ಭದ್ರತಾ ಸಿಬ್ಬಂದಿಗಳು ಬೆಳಗ್ಗೆಯಿಂದ ರಾತ್ರಿ 10ರವರೆಗೂ ಸುರಕ್ಷತೆ ಕಾಪಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಹೊಯ್ಸಳ ಪೊಲೀಸ್ ವಾಹನ ಕೂಡ ಬೆಳಗ್ಗೆಯಿಂದ ಸಂಜೆಯವರೆಗೂ ಭದ್ರತೆ ನೀಡುತ್ತಿದೆ.
Advertisement