ದಾವಣಗೆರೆ: ದಾವಣಗೆರೆ ಇಂಡಸ್ಟ್ರಿಯಲ್ ಏರಿಯಾದ ಶ್ರೀರಾಮನಗರದ ಪಂಚಮುಖಿ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ 70 ವರ್ಷದ ವೃದ್ಧೆ ಮೇಲೆ ಮೂವರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿದೆ.
ಹಾಸನ ಜಿಲ್ಲೆ ಕುರುಬರಹಳ್ಳಿ ಮೂಲದ ವೃದ್ಧೆ ಪಂಚಮುಖಿ ದೇವಸ್ಥಾನದಲ್ಲಿ ಆಶ್ರಯ ಪಡೆದು, ಕೆಲಸ ಮಾಡಿಕೊಂಡಿದ್ದರು. ಅದೇ ಭಾಗದ ನಿವಾಸಿಗಳಾದ ರಾಜು, ಸೂರಿ, ಅಣ್ಣಪ್ಪ ಎಂಬುವವರು ಅತ್ಯಾಚಾರ ನಡೆಸಿದ್ದಾರೆಂದು ವೃದ್ಧೆ ಹೇಳಿದ್ದಾರೆ. ಘಟನೆ ಬಗ್ಗೆ ಸ್ಥಳೀಯ ಮುಖಂಡರ ಗಮನಕ್ಕೆ ತಂದಿದ್ದರಿಂದ ಪ್ರಕರಣ ಈಗ ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ದುಷ್ಕರ್ಮಿಗಳು ಕತ್ತಲಲ್ಲಿ ಅತ್ಯಾಚಾರ ಎಸಗಿದ್ದು, ಮೂವರನ್ನೂ ವೃದ್ಧೆ ಗುರುತಿಸಿದ್ದಾರೆ. ಮಹಿಳಾ ಠಾಣೆಗೆ ಡಿಎಸ್ ಪಿ ಅಶೋಕ್ ಕುಮಾರ್ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ನಂತರ ವೃದ್ಧೆಯನ್ನು ವೈದ್ಯಕೀಯ ತಪಾಸಣೆಗೆ ಜಿಲ್ಲಾಸ್ಪತ್ರೆ ಗೆ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಯಿತು. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ದೇವಸ್ಥಾನ ಎದುರಲ್ಲೇ ರಾಜ್ಯ ಮಹಿಳಾ ನಿಲಯವೂ ಇದೆ.
Advertisement