ಹಾವೇರಿ/ಶಿವಮೊಗ್ಗ: ಗೋಮಾಂಸ ಸೇವನೆ ಕುರಿತು ಹೇಳಿಕೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹುಸಂಖ್ಯಾತರ ಭಾವನೆಗೆ ನೋವು ಮಾಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜ್ಯದ ಜನರ ಬಹಿರಂಗ ಕ್ಷಮೆ ಕೇಳಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು. ``ಕನಕರು, ಸಂಗೊಳ್ಳಿ ರಾಯಣ್ಣನ ಕುಲದಲ್ಲಿ ಹುಟ್ಟಿದ ಸಿದ್ದರಾಮಯ್ಯನವರು ಗೋಮಾಂಸ ಸೇವನೆ ಕುರಿತು ಹೇಳಿಕೆ ನೀಡಿರುವುದರಿಂದ ನನಗೆ ನಾಚಿಕೆಯಾಗುತ್ತಿದೆ. ಅದೇ ಕುಲದಲ್ಲಿ ನಾನೂ ಹುಟ್ಟಿರುವುದರಿಂದ ತಲೆ ಬಾಗಿಸಬೇಕಾಗಿದೆ.
ತಪ್ಪಾಗಿದೆ ಎಂದು ಸಿದ್ದರಾಮಯ್ಯ ಜನರ ಕ್ಷಮೆ ಕೇಳಬೇಕು. ಸ್ವರ್ಗದಲ್ಲಿರುವ ಕನಕ, ಸಂಗೊಳ್ಳಿ ರಾಯಣ್ಣನವರಿಗೆ ಸ್ವಲ್ಪವಾದರೂ ಸಮಾಧಾನ ಆಗಬಹುದು'' ಎಂದು ಹಾವೇರಿಯಲ್ಲಿ ಏರ್ಪಡಿಸಿದ್ದ ಅಂತ್ಯೋದಯ ಸಮಾವೇಶದಲ್ಲಿ ಅವರು ಹೇಳಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಾವ ಅಭಿವೃದ್ಧಿ ಕಾರ್ಯವೂ ಆಗುತ್ತಿಲ್ಲ. ಸರ್ಕಾರದ ಈ ಎಲ್ಲ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯಲು ಗೋಮಾಂಸ, ಹಂದಿ ಮಾಂಸದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಗೋಮಾಂಸ ಸೇವಿಸಿದರೆ ಮುಖ್ಯಮಂತ್ರಿಗಳ ರುಂಡ ಚೆಂಡಾಡುತ್ತೇವೆ
``ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕತ್ತಿದ್ದರೆ ಶಿವಮೊಗ್ಗಕ್ಕೆ ಬಂದು ಗೋಮಾಂಸ ಸೇವಿಸಲಿ. ಅವರ ರುಂಡ ಚೆಂಡಾಡುತ್ತೇವೆ'' ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ಸವಾಲೆಸೆದಿದ್ದಾರೆ. ಮುಖ್ಯಮಂತ್ರಿಗಳ ಗೋಮಾಂಸ ಸಂಬಂಧಿತ ಹೇಳಿಕೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರಿಂದ
ನಡೆದ ಪ್ರತಿಭಟನೆಯಲ್ಲಿ ಮಾತನಾತನಾಡಿದ ಅವರು, ಮುಖ್ಯಮಂತ್ರಿಗಳು ಗೋಹತ್ಯೆಯನ್ನು ಸ್ವಾಗತಿಸುತ್ತಾ ತಾವೂ ಕೂಡಾ ಗೋಮಾಂಸ ತಿನ್ನುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯಂತ ಉನ್ನತ ಸ್ಥಾನವನ್ನು ನಾವು ಕೊಟ್ಟಿದ್ದೇವೆ. ಗೋ ಮಾತೆಯ ಹಾಲನ್ನೇ ಕುಡಿದು ನಾವು ಬೆಳೆದವರು. ಮುಖ್ಯಮಂತ್ರಿಗಳ ಹೇಳಿಕೆ ಉದ್ಧಟಟತನದ್ದು, ಸಿಎಂ ವಿರುದ್ದ ಸಾರ್ವಜನಿಕ ದೂರನ್ನು
ದಾಖಲಿಸಬೇಕು ಎಂದು ಆಗ್ರಹಿಸಿದರು.
Advertisement