10 ಸಾವಿರ ಮಕ್ಕಳಿಗೆ ಕಾಡು ಪ್ರವಾಸ ಭಾಗ್ಯ

ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರೌಢಶಾಲಾ ಮಕ್ಕಳಿಗೆ `ಅರಣ್ಯ ವಾಸ್ತವ್ಯ' ಯೋಜನೆ ರೂಪಿಸಿದ್ದು, ಈ ಬಾರಿ 10,000 ಮಕ್ಕಳಿಗೆ ಕಾಡು ಪ್ರವಾಸ ಸೌಲಭ್ಯ ಕಲ್ಪಿಸಲಿದೆ.
ರಮಾನಾಥ ರೈ
ರಮಾನಾಥ ರೈ

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರೌಢಶಾಲಾ ಮಕ್ಕಳಿಗೆ `ಅರಣ್ಯ ವಾಸ್ತವ್ಯ' ಯೋಜನೆ ರೂಪಿಸಿದ್ದು, ಈ ಬಾರಿ 10,000  ಮಕ್ಕಳಿಗೆ ಕಾಡು ಪ್ರವಾಸ ಸೌಲಭ್ಯ ಕಲ್ಪಿಸಲಿದೆ.
`ಚಿಣ್ಣರ ವನದರ್ಶನ' ಎಂಬ ಯೋಜನೆಯಡಿ 9ನೇ ತರಗತಿಯ ಮಕ್ಕಳನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲೇ ಎರಡು ದಿನ ವಾಸ್ತವ್ಯ ಹೂಡಿ ವನ ಪ್ರವಾಸ ನಡೆಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದುಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಮಕ್ಕಳಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಈ ಯೋಜನೆ ರೂಪಿಸಲಾಗಿದ್ದು, ವಿಶೇಷವಾಗಿ ಕಾಡಂಚಿನ ಗ್ರಾಮಗಳ ಮಕ್ಕಳಿಗಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಈ ಬಾರಿ ಗದಗ ಮತ್ತು ಬೆಳಗಾವಿ ಸುತ್ತಮುತ್ತಲ ಅರಣ್ಯ ಭಾಗದಲ್ಲಿ ಈ ಯೋಜನೆ ಆರಂಭಿಸಲಾಗುತ್ತಿದೆ. 9ನೇ ತರಗತಿಯ 10ಸಾವಿರ ಮಕ್ಕಳನ್ನು ಆಯ್ಕೆ ಮಾಡಿ, ಅವರನ್ನು ಎರಡು ದಿನ ಕಾಡಿನಲ್ಲೇ ವಾಸ್ತವ್ಯ ಹೂಡುವಂತೆ ಮಾಡಲಾಗುತ್ತದೆ.

ಸಾಧ್ಯವಾದಷ್ಟು ಡಿಸೆಂಬರ್ ವೇಳೆಗೆ ಮಕ್ಕಳಿಗೆ ಪ್ರವಾಸ ಕರೆದೊಯ್ಯಲು ಯತ್ನಿಸಲಾಗುತ್ತದೆ. ಪ್ರವಾಸ ಕಾಲದಲ್ಲಿ ಮಕ್ಕಳಿಗೆ ಅರಣ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇಂಥ ಕಾರ್ಯಕ್ರಮಗಳಿಂದ ಮಕ್ಕಳು ಮುಂದೆ ಪರಿಸರ ಪ್ರೇಮಿಗಳಾಗುವುದು ಖಚಿತ ಎಂದರು.

ಡಿಸೆಂಬರ್‍ಗೆ ಡೀಮ್ಡ್  ವರದಿ: ಅರಣ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಗಡುವಿನಲ್ಲಿ ವರದಿಸಲ್ಲಿಸಲು ಸರ್ಕಾರ ಸಿದ್ಧವಾಗುತ್ತಿದ್ದು, ಈಗಾಗಲೇ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಮೀಕ್ಷೆ ನಡೆಸಲಾಗಿದೆ. ವರದಿಯನ್ನು ಸಂಪುಟದಲ್ಲಿ ಮಂಡಿಸಿ ಚರ್ಚಿಸಲಾಗುತ್ತದೆ. ನಂತರ ಅಂತಿಮವಾಗಿ ಡಿಸೆಂಬರ್ ವೇಳೆಗೆ  ಸುಪ್ರೀಂಕೋರ್ಟ್‍ಗೆ ವರದಿ ಸಲ್ಲಿಸಲಾಗುತ್ತದೆ ಎಂದು  ರಮಾನಾಥ ರೈ ವಿವರಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಇಲಾಖೆಯಲ್ಲಿ  ಫಾರೆಸ್ಟರ್, ಗಾರ್ಡ್ ಮತ್ತು ವಾಚರ್‍ಗಳನ್ನಾಗಿ ನೇಮಕ ಮಾಡಲಾಗುತ್ತಿದ್ದು, ಈ ಬಾರಿ ೧೭೫ ಮಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು  ರಮಾನಾಥ ರೈ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com