ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗಳು, ರಿಯಲ್ ಎಸ್ಟೇಟ್, ಮರಳು ಮಾಫಿಯಾ ಹಾಗೂ ಫೈನಾನ್ಸ್ ವ್ಯವಹಾರಗಳಲ್ಲಿ ತೊಡಗುವುದನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಚಟುವಟಿಕೆಗಳಿಂದ ದೂರವಿರಬೇಕೆಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳೊಂದಿಗೆ ಪ್ರಥಮ ಸಭೆಯಲ್ಲಿ ಎಲ್ಲಾ ಜಿಲ್ಲೆಗಳು, ಕಮಿಷನರೇಟ್ ವ್ಯಾಪ್ತಿಗಳಿಂದ ಆಗಮಿಸಿದ್ದ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಇಲಾಕೆಗೆ ಅದರದ್ದೇ ಅದ ಘನತೆ ಶಿಸ್ತು ಇದೆ. ಹೀಗಾಗಿ, ಹಿರಿಯ ಅಧಿಕಾರಿಗಳಾಗಿರುವವರು ಹಾಗೂ ತಮ್ಮ ಸುತ್ತಮುತ್ತ ಇರುವ ಹಿರಿಯ- ಕಿರಿಯ ಅಧಿಕಾರಿಗಳಿಗೆ ಇಂತಹ ಅಕ್ರಮಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು.
ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಂತಹ ಚಟುವಟಿಕೆ ನಡೆಸುತ್ತಿರುವುದು ನನ್ನ ಗಮನದಲ್ಲಿ ಮೊದಲಿನಿಂದಲೂ ಇದೆ. ಆದರೆ ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ. ಒಂದು ವೇಳೆ ಭಾಗಿಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಧಿಕಾರಿಗಳು ಈ ಮಾತನ್ನು ಎಚ್ಚರಿಕೆ ಅಥವಾ ಸೂಚನೆಯಂತಾದರೂ ಭಾವಿಸಿಕೊಳ್ಳಬಹುದು ಎಂದು ಗೃಹ ಸಚಿವರು ಹೇಳಿದರು.
ರಾಜ್ಯದಲ್ಲಿ ಭೂ, ಗಣಿಗಾರಿಕೆ ಹಾಗೂ ಫೈನಾನ್ಸ್ ಮಾಫಿಯಾ ವಿರುದ್ಧ ಹೋರಾಟಕ್ಕೆ ಪೊಲೀಸ್ ಇಲಾಖೆ ಕಟೀಬದ್ಧವಾಗಬೇಕು. ಹೀಗಾಗಿ ಮೊದಲು ಅಧಿಕಾರಿಗಳು ಭೂ ವ್ಯವಹಾರ ನಿಲ್ಲಿಸಬೇಕು ಎಂದು ಪರಮೇಶ್ವರ್ ಕರೆ ನೀಡಿದ್ದಾರೆ.
Advertisement