ಕುಂದಾಪುರ: ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜಯರಾಮ ಶೆಟ್ಟಿ ಎಂಬವರು ಕಳೆದ 23 ವರುಷಗಳಿಂದ ದೇಹದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ.
ಬೆನ್ನುಹುರಿ ಸ್ವಾಧೀನ ಕಳೆದುಕೊಂಡಾಗಿನಿಂದ ಶೆಟ್ಟಿ ಹಾಸಿಗೆಯಲ್ಲೇ ಜೀವನ ಕಳೆಯುತ್ತಿದ್ದಾರೆ.
ಕೊಂಕಣ ರೈಲ್ವೇಗಾಗಿ ಸುರಂಗ ಮಾರ್ಗ ನಿರ್ಮಿಸುವ ಕಂಪನಿಯೊಂದರಲ್ಲಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶೆಟ್ಟಿಯವರಿಗೆ 1992 ದುರಂತದ ವರ್ಷವಾಗಿತ್ತು. ಅದೊಂದು ದಿನ ಕೆಲಸ ಮಾಡುತ್ತಿರಬೇಕಾದರೆ ಕಲ್ಲೊಂದು ತಲೆಯ ಮೇಲೆ ಬಿದ್ದ ಪರಿಣಾಮ ಬೆನ್ನುಹುರಿಗೆ ಗಾಯಗಳಾಗಿ ದೇಹದ ಸ್ವಾಧೀನವೇ ಹೊರಟುಹೋಗಿ ಬಿಟ್ಟಿತು. ಈ ಒಂದು ಘಟನೆಯಿಂದಾಗಿ ಶೆಟ್ಟಿ ಹಾಸಿಗೆ ಹಿಡಿಯುವಂತಾಯಿತು.
ಆಸ್ಪತ್ರೆಗೆ ಸೇರಿಸಿದಾಗ ಸರ್ಕಾರ, ಸಹೋದ್ಯೋಗಿಗಳು, ನೆರೆಯವರೆಲ್ಲರೂ ಸಹಾಯ ಮಾಡಿದರು. ಈ ವಾರ್ತೆ ಮಾಧ್ಯಮಗಳಲ್ಲಿ ಬಂದಾಗ ಒಂದಷ್ಟು ದಾನಿಗಳು ಸಹಾಯವನ್ನೂ ಮಾಡಿದರು. ಆದರೆ ಆಸ್ಪತ್ರೆಯ ವೆಚ್ಚ ನಿರ್ವಹಿಸಲು ಇದೆಲ್ಲವೂ ಸಾಕಾಗುತ್ತಿಲ್ಲ.
ಈ ಬಗ್ಗೆ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಶೆಟ್ಟಿ, ಪ್ರತೀ ತಿಂಗಳು ಚಿಕಿತ್ಸೆ ಮತ್ತು ಔಷಧಿಗಾಗಿ ನಾನು ಮಣಿಪಾಲಕ್ಕೆ ಹೋಗಬೇಕಾಗುತ್ತದೆ. ಈ ಮೊದಲು ರು. 8,000 ಸಾಕಾಗುತ್ತಿತ್ತು. ಈಗ ರು. 9,000 ಬೇಕಾಗುತ್ತಿದೆ.
ಶೆಟ್ಟಿ ಜತೆ ಅವರ ಕುಟುಂಬದವರು ಸದಾ ಸಹಾಯಕ್ಕಾಗಿ ಇರುತ್ತಾರೆ. ನೆರೆ ಮನೆಯ ನಾಗೇಶ್ ಎಂಬವರೇ ಶೆಟ್ಟಿಗೆ ಔಷಧಿಗಳನ್ನು ತಂದುಕೊಂಡುತ್ತಿದ್ದಾರೆ.
ಆದರೆ ಇನ್ನೊಬ್ಬರ ಸಹಾಯದಿಂದ ಬದುಕುವುದಕ್ಕೆ ಶೆಟ್ಟಿಗೆ ಮನಸ್ಸು ಬರುತ್ತಿಲ್ಲ. ವಾಹನವೊಂದನ್ನು ಖರೀದಿಸಿ ಬಾಡಿಗೆಗೆ ಕೊಟ್ಟು ತಿಂಗಳಲ್ಲಿ ರು. 5000 ಸಂಪಾದನೆ ಮಾಡಬೇಕೆಂಬ ಹಂಬಲ ಶೆಟ್ಟಿಗಿದೆ. ರು. 3 ಲಕ್ಷದಲ್ಲಿ ಒಂದು ಮಾರುತಿ ಓಮ್ನಿ ಖರೀದಿಸಬೇಕು.. ಅದನ್ನು ಬಾಡಿಗೆಗೆ ಕೊಟ್ಟು ಸಂಪಾದನೆ ಮಾಡಬೇಕು. ಇದರಿಂದ ನನ್ನ ಔಷಧಕ್ಕಾಗುವ ಖರ್ಚನ್ನು ಸ್ವಲ್ಪವಾದರೂ ಭರಿಸಬಹುದು ಅಂತಾರೆ ಶೆಟ್ಟಿ.
ನನಗೆ ಏನು ಇಲ್ಲವೋ ಅದರ ಬಗ್ಗೆ ಯೋಚಿಸುವುದನ್ನು ಬಿಟ್ಟು, ನನಗೇನಿದೆಯೋ ಅದರ ಬಗ್ಗೆ ಯೋಚಿಸುತ್ತೇನೆ ಎನ್ನುವ ಶೆಟ್ಟಿ ಎದೆಗುಂದದೆ ಬದುಕುವುದಕ್ಕೆ ಪ್ರೇರಣೆಯಾಗಿದ್ದಾರೆ.
ಶೆಟ್ಟಿಯವರಿಗೆ ಸಹಾಯ ಮಾಡಬೇಕೆಂದು ಬಯಸುವವರು ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
Name - Jayaram Shetty
Address: Sarkal Hosemane Kandlur-Post Kundapur Taluk, District Udupi, Karnataka, India