ಬೆಂಗಳೂರು: ಮೊಬೈಲ್ನಲ್ಲಿ ಮಾತನಾಡುತ್ತ ನಿಂತಿದ್ದ ವ್ಯಕ್ತಿಯೊಬ್ಬರಿಗೆ ದಿಢೀರ್ ಭೂಕಂಪನದ ಅನುಭವ! ಹೌದು.
ನಗರದ ಸಿವಿಲ್ ಕೋರ್ಟ್ ಮುಂಭಾಗ ಬೈಕ್ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಭೂಮಿ ಕುಸಿದ ಪರಿಣಾಮ ಏತನ್ಮಧ್ಯೆ ವ್ಯಕ್ತಿಯೊಬ್ಬರು ಸುಮಾರು 20 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ.
ತಕ್ಷಣ ಪಕ್ಕದಲ್ಲೇ ಇದ್ದ ಜನರು ಧಾವಿಸಿ ಬಂದು ಗುಂಡಿಯಿಂದ ಮೇಲೆತ್ತಿದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಗುಂಡಿಗೆ ಬಿದ್ದಿರುವ ವ್ಯಕ್ತಿಯನ್ನು ಚಾಮರಾಜಪೇಟೆ ನಿವಾಸಿ ನಂದಕುಮಾರ್ ಎಂದು ತಿಳಿದುಬಂದಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೋರ್ಟ್ ಮುಂಭಾಗ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ಸುತ್ತಮುತ್ತಲ ಪ್ರದೇಶ ಜಾಗ ಸಡಿಲಗೊಂಡಿದೆ. ಅಲ್ಲದೆ ಕಳೆದ ಮೂರು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವುದು ಭೂಮಿ ಮತ್ತಷ್ಟು ಕುಸಿದಿರುವುದು ಸಹ ಘಟನೆ ಜರುಗಲು ಕಾರಣವಾಗಿದೆ.
ಈ ಸಂಬಂಧ ಬಿಎಂಆರ್ಸಿಎಲ್ ವಿರುದ್ಧ ಆರ್ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.