ಬೆಂಗಳೂರು: ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಹುದ್ದೆಗೆ ಹಿರಿಯ ನ್ಯಾಯವಾದಿ ಮಧುಸೂದನ್ ಆರ್.ನಾಯಕ್ ನೇಮಕಗೊಂಡಿದ್ದಾರೆ.
ಪ್ರೊ.ರವಿವರ್ಮಕುಮಾರ್ ಅಡ್ವೋಕೇಟ್ ಜನರಲ್ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕರಿಸಿ ನೂತನ ಅಡ್ವೋಕೇಟ್ ಜನರಲ್ ಆಗಿ ಮಧುಸೂದನ್ ಆರ್.ನಾಯಕ್ ಹೆಸರು ಪರಿಗಣಿಸಲು ಕೋರಿ ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಸರ್ಕಾರ ಶಿಫಾರಸು ಮಾಡಿತ್ತು. ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರೊ.ರವಿವರ್ಮ ಕುಮಾರ್ ಅವರು ಅಡ್ವೋಕೇಟ್ ಜನರಲ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದನ್ನು ಅಂಗೀಕಾರ ಮಾಡಿ ಹೊಸಬರ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ ಎಂದು ಹೇಳಿದರು.
ನ್ಯಾಯಾಂಗ ನೇಮಕಾತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಮ್ಮ ಸಲಹೆ-ಸೂಚನೆ ಪಡೆಯುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ ಪ್ರೊ.ರವಿವರ್ಮ ಕುಮಾರ್ ಅಕ್ಟೋಬರ್ 26ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಸರ್ಕಾರ ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿಯುತ ಹುದ್ದೆಯ ಹೊಣೆಗಾರಿಕೆ ವಹಿಸಿರುವುದು ಸಂತಸ ತಂದಿದೆ. ಆ ಸ್ಥಾನದ ಘನತೆ-ಗೌರವ ಕಾಪಾಡುವುದರ ಜತೆಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
Advertisement