ಇತಿಹಾಸ ಹೇಳುವುದು ಶಿಲ್ಪಿಯ ಹೊಣೆಯಲ್ಲ: ಶಿಲ್ಪಿ ಶ್ರೀಧರಮೂರ್ತಿ

ಲಂಡನ್‍ನಲ್ಲಿ ಪ್ರತಿಷ್ಠಾಪಿಸಿರುವ ಶಿಲ್ಪದ ಕೆಳಗೆ ಬಸವಣ್ಣನ ಜೀವಿತಾವಧಿ ಚರ್ಚೆಗೆ ಅವಕಾಶ ನೀಡುವಂತೆ ನಮೂದಾಗಿರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ...
ಲಂಡನ್ ನಲ್ಲಿರುವ ಬಸವಣ್ಣ ಪ್ರತಿಮೆ
ಲಂಡನ್ ನಲ್ಲಿರುವ ಬಸವಣ್ಣ ಪ್ರತಿಮೆ

ಶಿವಮೊಗ್ಗ: `ಲಂಡನ್‍ನಲ್ಲಿ ಪ್ರತಿಷ್ಠಾಪಿಸಿರುವ ಶಿಲ್ಪದ ಕೆಳಗೆ ಬಸವಣ್ಣನ ಜೀವಿತಾವಧಿ ಚರ್ಚೆಗೆ ಅವಕಾಶ ನೀಡುವಂತೆ ನಮೂದಾಗಿರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ಶಿಲ್ಪವನ್ನು ರಚಿಸುವುದಷ್ಟೇ ನನ್ನ ಕೆಲಸ. ಇತಿಹಾಸಕಾರನ ಕೆಲಸ ನನ್ನದಲ್ಲ'; ಲಂಡನ್‍ನ ಥೇಮ್ಸ್ ನದಿ ದಡದ ಮೇಲೆ ಪ್ರತಿಷ್ಠಾಪಿಸಿರುವ ಬಸವಣ್ಣನ ಮೂರ್ತಿ ಸರ್ವರ ಪ್ರಶಂಸೆಗೆ ಪಾತ್ರವಾದರೂ ಅಲ್ಲಿ ನಮೂದಾಗಿರುವ ಬಸವಣ್ಣನ ಜೀವಿತಾವಧಿ 32 ವರ್ಷ ಎಂದಿರುವ ಬಗ್ಗೆ ವಿವಾದವೆದ್ದಿತ್ತು.

ಈ ಬಗ್ಗೆ ಮಾತನಾಡಿರುವ ಶಿಲ್ಪಿ ಶ್ರೀಧರಮೂರ್ತಿ ಶಿಲ್ಪದ ಬಗೆಗಿನ ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. ಅವರೊಂದಿಗಿನ ಮಾತುಕತೆಯ ಸಂಕ್ಷಿಪ್ತ ರೂಪ ಇಲ್ಲಿದೆ.

ಬಸವಣ್ಣನ ಹಲವು ರೂಪಗಳಿವೆ. ಭಕ್ತ ಬಸವಣ್ಣ, ಭಂಡಾರಿ ಬಸವಣ್ಣ, ಮಂತ್ರಿ ಬಸವಣ್ಣ ಹೀಗೆ. ನೀವು ಕಿರೀಟಧಾರಿ ಬಸವಣ್ಣನ ರೂಪ ಆರಿಸಿದ್ದು ಹೇಗೆ?
ಜಗತ್ತಿನ ಮೊದಲ ಪಾರ್ಲಿಮೆಂಟ್ ರೂಪಿಸಿದ್ದು ಬಸವಣ್ಣ ಎಂದು ಬಿಂಬಿಸುವ ಆಶಯ ಇತ್ತು. ಹಾಗಾಗಿಯೇ ಮಂತ್ರಿ ಬಸವಣ್ಣನ ಶಿಲ್ಪವನ್ನೇ ಮಾಡುವಂತೆ ನನಗೆ ಸೂಚಿಸಲಾಗಿತ್ತು. ಇದಿಷ್ಟೇ ಅಲ್ಲ. ಬಸವಣ್ಣನ ಕಾಲದ ಸಾಮಾಜಿಕ ವ್ಯವಸ್ಥೆ ಬಗ್ಗೆಯೂ ಹೇಳಬೇಕಿತ್ತು. ಹಾಗಾಗಿ ಪೀಠದ ಕೆಳಗೆ ಪೆಡೆಸ್ಟಲ್ ಭಾಗದಲ್ಲಿ ಎರಡು ಕಡೆ ಕಂಚಿನ ಉಬ್ಬು ಶಿಲ್ಪ ರೂಪಿಸಲಾಗಿದೆ. ಒಂದು ಉಬ್ಬು ಶಿಲ್ಪದಲ್ಲಿ ಅಂದಿನ ಅನುಭವ ಮಂಟಪ ಚಿತ್ರಿಸಲಾಗಿದೆ. ಆಗಿನ ಸಮಾಜದಲ್ಲಿ ಜನಸಾಮಾ ನ್ಯರ ಸಮಸ್ಯೆ, ಜವಾಬ್ದಾರಿಗಳನ್ನು ಚರ್ಚಿಸುತ್ತಿರುವ ದೃಶ್ಯವದು. ಇನ್ನೊಂದು ಉಬ್ಬು ಚಿತ್ರದಲ್ಲಿ ಅಂತರ್ಜಾತಿ ವಿವಾಹ ನಂತರ ನಡೆದ ಘಟನೆಗಳನ್ನು ಬಿಂಬಿಸಲಾಗಿದೆ.

ಶಿಲ್ಪದ ಬಗ್ಗೆ ಶಿಲ್ಪಿಯ ಭಾವ ಏನು?

ನನಗೆ ತುಂಬಾ ಸಂತೋಷ ಆಯಿತು. ಭಾರತೀಯ ಶಿಲ್ಪವನ್ನು ಯೂರೋಪಿಯನ್ನರು ಹೇಗೆ ಒಪ್ಪುತ್ತಾರೆ ಎಂಬ ಕುತೂಹಲವೂ ಇತ್ತು. ನಾವು ಮುಖ್ಯವಾಗಿ ಇಲ್ಲಿನ ಶೈಲಿಯನ್ನು ಬಿಂಬಿಸಬೇಕಿತ್ತು. ನಮ್ಮ ಕಲೆ ಯಾವ ಮಟ್ಟದಲ್ಲಿದೆ ಎಂದೂ ತೋರಿಸಬೇಕಿತ್ತು. ಅದೇ ಸವಾಲಿನ ಕೆಲಸ. ಹಲವು ಮಾಡೆಲ್ ಗಳನ್ನು ರಚಿಸಿ, ಅಂತಿಮ ಹಂತಕ್ಕೆ ತಂದೆವು. ಮುಖಭಾವ, ವ್ಯಕ್ತಿತ್ವ ಇತ್ಯಾದಿ ಅಂಶಗಳ ಬಗ್ಗೆ ವೀರಶೈವ ಲಿಂಗಾಯಿತ ಗುರುಗಳಿಗೆ ಈ ಮಾಡೆಲ್‍ಗಳನ್ನು ತೋರಿಸಿ, ಎಲ್ಲರ ಒಪ್ಪಿಗೆ ಪಡೆದ ಮೇಲೆಯೇ ಅಂತಿಮ ಗೊಳಿಸಲಾಯಿತು.

ನೀವು ಈ ಹಿಂದೆ ಮಾಡಿದ ಬಸವಣ್ಣನ ಶಿಲ್ಪಕ್ಕೂ, ಈ ಶಿಲ್ಪಕ್ಕೂ ಭಿನ್ನತೆ ಏನು?  
ಬಸವಕಲ್ಯಾಣದಲ್ಲಿ ಬಸವಣ್ಣನ 100 ಅಡಿ ಶಿಲ್ಪವನ್ನೂ ಮಾಡಿದ್ದೇವೆ. ಜನರ ಪ್ರತಿಕ್ರಿಯೆ ಗಮನಿಸಿದ್ದೆವು. ಅಲ್ಲಿ ಅವರ ಮುಖ ಭಾವ, ವ್ಯಕ್ತಿತ್ವ ಎಲ್ಲವೂ ಸರಿಯಾಗಿದೆ ಎಂಬ ಅಭಿಪ್ರಾಯ ಬಂದ ನಂತರ ಅದರ ಆಧಾರದಲ್ಲಿಯೇ ಈ ಕಂಚಿನ ಶಿಲ್ಪ ಮಾಡಿದೆ. ಮೊದಲು ನಮ್ಮ ಜನರು ಒಪ್ಪಬೇಕಿತ್ತು. ಒಪ್ಪಿದ್ದಾರೆ. ಸಮಾಧಾನ ಸಿಕ್ಕಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com