ಬೆಂಗಳೂರು: ಅವಕಾಶ ವಂಚಿತರಿಗೆ ಅವಕಾಶ ಸಿಗಬೇಕು ಹಾಗೂ ಕೆಳವರ್ಗಕ್ಕೆ ನ್ಯಾಯ ದೊರೆಯಬೇಕು ಎನ್ನುವುದೇ ಎಂ. ವೀರಪ್ಪ ಮೊಯ್ಲಿ ಅವರ ಸಾಹಿತ್ಯದ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸರಸ್ವತಿ ಸಮ್ಮಾನ್ ಪುರಸ್ಕೃತ ಸಂಸದ ಎಂ.ವೀರಪ್ಪ ಮೊಯ್ಲಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೊಯ್ಲಿ ಅವರು ಸಾಮಾನ್ಯರ ನಡುವಿನಿಂದ ಬಂದವರು. 10 ವರ್ಷ ತಪಸ್ಸಿನಂತೆ ಕೆಲಸ ಮಾಡಿದ ಅವರು ಮಹಾಕಾವ್ಯ ರಚಿಸಿ ಸಾಹಿತ್ಯಕ್ಕೆ ಹೆಸರು ತಂದಿದ್ದಾರೆ. ಸಾಹಿತ್ಯ ಹಾಗೂ ರಾಜಕೀಯದಲ್ಲಿ ನಿಪುಣರಾದ ಅವರು ಬದುಕಿನಲ್ಲಿ ಅಭಿವ್ಯಕ್ತಿಯನ್ನು ಸಾಹಿತ್ಯದ ಮೂಲಕ ಹೇಳಿದ್ದಾರೆ ಎಂದು ಶ್ಲಾಘಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೀರಪ್ಪ ಮೊಯ್ಲಿ, ಶ್ರೀರಾಮ ವನವಾಸಕ್ಕೆ ತೆರಳಿದ್ದ ಸಂದರ್ಭದಲ್ಲೇ ಪ್ರಜಾಪ್ರಭುತ್ವ ಕಾಣಸಿಗುತ್ತದೆ. ಆ ಸಮಯದಲ್ಲಿ 14 ವರ್ಷಗಳ ಕಾಲ ಶ್ರೀರಾಮ ಅಥವಾ ಭರತ ರಾಜ್ಯವಾಳಲಿಲ್ಲ. ಆಕ್ರಮಣಶೀಲ ಅಥವಾ ವಸಾಹತುಶಾಹಿಯ ಪ್ರವೃತ್ತಿ ರಾಮಾಯಣದಲ್ಲಿಲ್ಲ. ಕಾವ್ಯದಲ್ಲಿ ಬರುವ ಸೇತುಬಂಧನ ಎನ್ನುವುದು ಸೌಹಾರ್ದದ ಸಂಕೇತವಾಗಿದೆ ಎಂದರು. ವಿಧಾನಪರಿಷತ್ತು ಸಭಾಪತಿ ಡಿ. ಎಚ್.ಶಂಕರಮೂರ್ತಿ, ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ, ಸಚಿವ ಕೆ. ಜೆ.ಜಾರ್ಜ್, ಮೇಯರ್ ಮಂಜುನಾಥ ರೆಡ್ಡಿ ಹಾಜರಿದ್ದರು.
Advertisement