ರಾಜ್ಯದ ಯುವಕರನ್ನು ಸೆಳೆಯುತ್ತಿರುವ ಐಸಿಸ್ ಸಂಘಟನೆ : ಪರಮೇಶ್ವರ್
ಬೆಂಗಳೂರು: ಕುಖ್ಯಾತ ಅಪಾಯಕಾರಿ ಉಗ್ರಗಾಮಿ ಸಂಘಟನೆ ಐಸಿಸ್ಗೆ ರಾಜ್ಯದ ಯುವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಇಂಟಲಿಜೆನ್ಸ್ ಬ್ಯುರೋದಿಂದ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದ್ದಾರೆ.
ಐಸಿಸ್ ಗೆ ನಮ್ಮ ರಾಜ್ಯದ ಯುವಕರು ಸೇರ್ಪಡೆಗೊಳ್ಳುತ್ತಿರುವುದು ಗಂಭೀರ ವಿಷಯವಾಗಿದ್ದು, ಇದನ್ನು ತಡೆಗಟ್ಟಲು ರಾಜ್ಯ ಪೊಲೀಸ್ ಪಡೆ ತೀವ್ರ ಕಟ್ಟೆಚ್ಚರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವರು ಐಸಿಸ್ ಸಂಘಟನೆಗೆ ಸೇರ್ಪಡೆಗೊಂಡಿರುವ ಮಾಹಿತಿಯಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಸಂಘಟನೆಗೆ ನೇಮಕಾತಿ ನಡೆಸಲಾಗುತ್ತಿದೆ ಎಂಬ ಬಗ್ಗೆ ಐಬಿಯಿಂದ ಮಾಹಿತಿ ಬಂದಿದೆ. ಇದು ನಿಜಕ್ಕೂ ಕಳವಳಕಾರಿ ವಿಷಯ.ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ.
ಐಸಿಸ್ ಸಂಘಟನೆಗೆ ಈವರೆಗೆ 23 ಭಾರತೀಯರು ಸೇರ್ಪಡೆಗೊಂಡಿದ್ದಾರೆ. ಅವರಲ್ಲಿ ಬೆಂಗಳೂರಿನ ಶಿವಾಜಿನಗರದ ಉಮರ್ ಸುಬಾನ್, ಫೈಜ್ ಮಸೂದ್, ಭಟ್ಕಳದ ಕಾದಿರ್ ಸುಲ್ತಾನ್ ಆರ್ಮರ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿದೇಶಿ ಗುಪ್ತಚರ ಸಂಸ್ಥೆಗಳ ವರದಿಯಿಂದ ತಿಳಿದು ಬಂದಿದೆ. ಐಸಿಸ್ ಸಂಘಟನೆ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿತ್ತು.