ಬೆಂಗಳೂರು: ಪ್ರತಿ ಭಾನುವಾರ ನಗರದ ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ. ಪ್ರತಿ ವಾರವೂ ವಿಶೇಷ ಕಾರ್ಯಕ್ರಮಗಳು ವಾಯುವಿಹಾರಿಗಳಿಗೆ ಮುದನೀಡುತ್ತಿವೆ. ಈ ವಾರವೂ ಉದ್ಯಾನದಲ್ಲಿ ಉದಯ ರಾಗ ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮಿ ಮತ್ತು ತಂಡದವರಿಂದ ಭಕ್ತಿಗೀತೆ ಹಾಗೂ ಜನಪದಗೀತೆಗಳ ಗಾಯನ ನಡೆಯಿತು.ಬೆಳಗ್ಗೆ 7ರಿಂದ ಯೂನಿವರ್ಸ್ ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಆರತಿ ವಿಜಯಕುಮಾರ್ ಅವರಿಂದ ಭರತನಾಟ್ಯ,ದಿ ಸಂಸ್ಕೃತಿ ಟೆಂಪಲ್ ಆಫ್ ಆರ್ಟ್ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಗುರುನಾಗಶ್ರೀ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ಉದ್ಯಾನಕ್ಕೆ ಮೆರುಗು ನೀಡಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಕ್ಷಯ ಫೌಂಡೇಶನ್ ವತಿಯಿಂದ ಕನ್ನಡ ಪ್ರಾಧ್ಯಾಪಕ ರವಿಕುಮಾರ್ ನಿಹಾ ಅವರಿಂದ ಶಾಂತಕವಿಯ ಕನ್ನಡ ಪರಿಕಲ್ಪನೆ ಕುರಿತು ವಿಶೇಷ ಉಪನ್ಯಾಸ, ಇದರೊಂದಿಗೆ ರೇಷ್ಮೆ ಇಲಾಖೆಯಿಂದ ರೇಷ್ಮೆಗೂಡಿನಿಂದ ಮಾಡಿದ ವಿವಿಧ ವಿನ್ಯಾಸದ ಹಾರಗಳು, ಅಲಂಕಾರಿಕ ಮತ್ತು ಇತರೆ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಆಯೋಜನೆಗೊಂಡಿತ್ತು.