ಬೆಂಗಳೂರು: ಮಾರಕ ಎಚ್1ಎನ್1ಗೆ ರಾಜ್ಯದಲ್ಲಿ ಈ ಬಾರಿ 85 ಮಂದಿ ಬಲಿಯಾಗಿದ್ದಾರೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಎಚ್ 1ಎನ್1 ವ್ಯಾಪಿಸಿ ಸುಮಾರು 500 ಜನರನ್ನು ಬಲಿ ತೆಗೆದುಕೊಂಡಿದೆ.
ಆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಆಗಿರುವ ಸಾವಿನ ಸಂಖ್ಯೆ ಕಡಿಮೆ. 2009ರಿಂದ ರಾಜ್ಯದಲ್ಲಿ ಎಚ್ 1ಎನ್1 ರೋಗ ಕಾಡಲಾರಂಭಿಸಿದ್ದು, ಆ ಸಂದರ್ಭದಲ್ಲಿ 135ಮಂದಿ ಮೃತಪಟ್ಟಿದ್ದರು. ಆದರೆ ಈ ಬಾರಿ ಮತ್ತೆ ರಾಜ್ಯದಲ್ಲಿ ರೋಗ ಕಾಣಿಸಿಕೊಂಡಿದೆ. ಕಳೆದ 8 ವರ್ಷಗಳಲ್ಲಿ ರೋಗ ವ್ಯಾಪಿಸಿರುವ ರೀತಿ ನೋಡಿದರೆ, ಈ ವರ್ಷ 10,977 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 3436 ಮಂದಿಗೆ ರೋಗ ಇರುವುದು ಪತ್ತೆಯಾಗಿತ್ತು. ಇವರ ಪೈಕಿ 85ಮಂದಿ ಸಾವಿಗೀಡಾಗಿದ್ದಾರೆ. ಆದರೆ ಈ ಎಲ್ಲ ಸಾವು ಪ್ರಕರಣಗಳು ಮೇ ತಿಂಗಳಿಗೂ ಮುನ್ನ ಸಂಭವಿಸಿದೆ. ಅಂದರೆ ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವೈರಸ್ ಹೆಚ್ಚು ಕಾಣಿಸಿಕೊಂಡಿತ್ತು.
ಅದೇ ಸಂದರ್ಭದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಿತ್ತು. ಒಟ್ಟಾರೆ ಎಚ್1ಎನ್1 ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳನ್ನು ಇನ್ನೂ ಕಾಡುತ್ತಿರುವುದರಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಕ್ಟೋಬರ್ 6ರಂದು ರಾಜ್ಯ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ರೋಗ ತಡೆಗೆ ರಾಜ್ಯ ಕೈಗೊಳ್ಳಬೇಕಿರುವ ಕ್ರಮಗಳನ್ನು ಸೂಚಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ವಾಮದೇವ್ ತಿಳಿಸಿದ್ದಾರೆ.
Advertisement