ಬೆಂಗಳೂರು: ದಿನ ನಿತ್ಯದ ಅಡುಗೆಗೆ ಅತ್ಯಗತ್ಯವಾಗಿ ಬೇಕಾಗುವ ತೊಗರಿಬೇಳೆ ದರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200 ರೂ. ತಲುಪಿದ್ದು, ಜನತೆ ಅಡುಗೆಗೆ ತೊಗರಿ ಬಳಸಲು ಹಿಂದೇಟು ಹಾಕುವಂತಾಗಿದೆ.
ತೊಗರಿ ಬೇಳೆಯ ದಿಢೀರ್ ಬೆಲೆ ಏರಿಕೆಯಿಂದಾಗಿ ಗ್ರಾಹಕರು ತತ್ತರಿಸಿ ಹೊಗಿದ್ದಾರೆ. ಏರಿರಿುವ ತೊಗರಿ ಬೇಳೆ ಬೆಲೆ ಸದ್ಯಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕಲಬುರಗಿಯಲ್ಲಿ ಶೇ. 20ರಿಂದ 30ರಷ್ಟು ಮಾತ್ರ ಬೆಳೆ ಬಂದಿತ್ತು. ಅದರಲ್ಲೂ ಶೇ.50ರಷ್ಟು ರಫ್ತಾಗಿದ್ದ ಪರಿಣಾಮ ತೊಗರಿ ಬೆಲೆ ಗಗನಕ್ಕೇರಲು ಕಾರಣವಾಯಿತು.
ಇನ್ನು ತೊಗರಿ ಬೇಳೆ ದರದಿಂದ ಬೇಸತ್ತಿರುವ ಜನ ಬೇಳೆ ಬದಲು ಚಿಕನ್ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ, ತೊಗರಿ ಬೇಳೆಗಿಂತ ಚಿಕನ್ ರೇಟ್ ಕಡಿಮೆ ಇದೆ.
ಕಳೆದ 2 ತಿಂಗಳ ಹಿಂದೆ ಸಗಟು ದರದಲ್ಲಿ ಕೆ.ಜಿ.ಗೆ 120, ತಿಂಗಳ ಹಿಂದೆ 140 ರೂ. ಇದ್ದ ತೊಗರಿ ಏಕಾಏಕಿ ಇದೀಗ ಕೆ.ಜಿ.ಗೆ 200 ರೂ.ಗೆ ಏರಿಕೆದೆ. ದಿನದಿಂದ ದಿನಕ್ಕೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೂ ತೊಗರಿ ಸರಬರಾಜು ಕಡಿಮೆಯಾಗುತ್ತಿದೆ.
ದಿನವೊಂದಕ್ಕೆ 40ರಿಂದ 50 ಮೂಟೆ ಮಾರಾಟವಾಗುತ್ತಿತ್ತು. ಆದರೆ, ಕಳೆದ 15 ದಿನದಿಂದ ಕೇವಲ 5 ರಿಂದ 6 ಮೂಟೆ ಮಾತ್ರ ಮಾರಾಟವಾಗುತ್ತಿವೆ. ಅದರಲ್ಲೂ ಚಿಲ್ಲರೆ ವ್ಯಾಪಾರಿಗಳು 25 ಕೆ.ಜಿ.ಗಿಂತ ಹೆಚ್ಚಿಗೆ ಖರೀದಿಸುತ್ತಿಲ್ಲ.
ಒಂದೆಡೆ ತರಕಾರಿ ಬೆಲೆ ಕೂಡ ಗಗನ ಮುಖಿಯಾಗಿದೆ, ಈರುಳ್ಳಿ ದರ ಸ್ವಲ್ಪ ಕುಗ್ಗಿದೆ. ಹೀಗಾಗಿ ಏನು ತಿಂದು ಬದುಕಬೇಕು ಎಂದು ಜನ ಯೋಚಿಸುವಂತಾಗಿದೆ.
Advertisement