
ಬೆಂಗಳೂರು: ದೊಡ್ಡಬಳ್ಳಾಪುರ ಟೌನ್ ಠಾಣೆ ಎಸ್ಸೈ ಜಗದೀಶ್ ಹತ್ಯೆ ಆರೋಪಿಗಳ ಬಗ್ಗೆ ಪೊಲೀಸರಿಗೆ ಮೂರು ದಿನ ಕಳೆದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಆರೋಪಿಗಳಾದ ಹರೀಶ್ ಬಾಬು ಹಾಗೂ ಮಧುನ ಎಂಟಕ್ಕೂ ಹೆಚ್ಚು ಸಹಚರರನ್ನು ತನಿಖಾ ತಂಡಗಳು ಪತ್ತೆ ಮಾಡಿವೆ. ಆದರೆ, ಸಹಚರರ ಪೈಕಿ ಸಂತೋಷ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಉಳಿದ ಆರೋಪಿಗಳು ದಿಕ್ಕಾಪಾಲಾಗಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ವಿವಿಧ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆಯ ಪ್ರಗತಿ ಹಾಗೂ ಶೋಧ ಕಾರ್ಯಾಚರಣೆ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರು ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದರು.
ಹಂತಕರ ಮೊಬೈಲ್ ಫೋನ್ ನೆಟ್ವರ್ಕ್ ಆಧಾರದ ಮೇಲೆ ಅವರ ಸ್ಥಳಗಳ ಪತ್ತೆ ಕಾರ್ಯ ನಡೆದಿದೆ. ಆದರೆ, ಆರೋಪಿಗಳು ಮೊಬೈಲ್ ಫೋನ್ ಹಾಗೂ ಸಿಮ್ ಎರಡನ್ನೂ ಬದಲಿಸಿರುವುದರಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸಹಚರರು ಹಾಗೂ ಸಂಬಂಧಿಕರಿಂದ ಆರೋಪಿಗಳು ತೆರಳಿರಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆದಿದೆ
ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಆರೋಪಿ ಮಧು ತಾಯಿ ತಿಮ್ಮಕ್ಕ ಮತ್ತು ಆಕೆ ಗಂಡ ಕೃಷ್ಣಪ್ಪ ಸಹ ಕುಖ್ಯಾತ ಮನೆಗಳ್ಳರಾಗಿದ್ದರು. 4 ವರ್ಷಗಳ ಹಿಂದೆ ಕಳವು ಮಾಡುವ ವೇಳೆ ಸಿಕ್ಕಿಬಿದ್ದಿದ್ದ ಕೃಷ್ಣಪ್ಪ ನನ್ನು ಜನ ಥಳಿಸಿ ಕೊಂದು ಹಾಕಿದ್ದರು. ಆದರೆ, ತಿಮ್ಮಕ್ಕ ತನ್ನ ಪತಿ ಅಪಘಾತದಲ್ಲಿ ಮೃತಪಟ್ಟಿದ್ದ ಎಂದು ಹೇಳಿಕೊಂಡಿದ್ದಳು. ತಿಮ್ಮಕ್ಕನಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಲ್ಲರೂ ಸರಗಳ್ಳತನದಲ್ಲಿ ನಿಪುಣರು ಎಂದು ತಿಮ್ಮಕ್ಕನ ಅಳಿಯನಾಗಿದ್ದ ಮಂಜುನಾಥ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೊಡ್ಡ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿದ್ದರು. ಕಳ್ಳತನಕ್ಕೆ ನೆರವಾಗುವ ಉದ್ದೇಶದಿಂದ ಮತ್ತೊಬ್ಬ ಮಗಳನ್ನು ಪೊಲೀಸನ ಜತೆ ವಿವಾಹ ಮಾಡಿಸಲು ತಿಮ್ಮಕ್ಕ ಆಲೋಚಿಸಿದ್ದಳು. ಆದರೆ, ಅದು ಸಾಧ್ಯವಾಗಲಿಲ್ಲ. ಕಳ್ಳತನ ಕೃತ್ಯದಲ್ಲಿ ಭಾಗಿ ಸೇರಿದಂತೆ ಅವರು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ಮಗಳನ್ನು ನನ್ನ ಜತೆ ಕಳುಹಿಸದೆ ದೂರ ಮಾಡಿದ್ದಾಗಿ ಮಂಜುನಾಥ ಅಳಲು ತೋಡಿಕೊಂಡಿದ್ದಾರೆ.
ಕಳ್ಳತನದ ತರಬೇತಿ ಕೊಡುತ್ತಿದ್ದ: ಮನೆಗಳವು ಹಾಗೂ ವಾಹನ ಕಳ್ಳತನ ಬಗ್ಗೆ ತಿಮ್ಮಕ್ಕನ ಮಕ್ಕಳಿಗೆ ಹರೀಶ್ ಬಾಬು ತರಬೇತಿ ಕೊಡುತ್ತಿದ್ದ. ಆತನ ಮಾರ್ಗದರ್ಶನದಲ್ಲಿ ಮಧು ಮತ್ತು ಆತನ ಸೋದರ ರಘು ಕಳವು ಮಾಡುತ್ತಿದ್ದರು. ಹರೀಶ್ಬಾಬು ಮತ್ತು ಮಧು ಈ ಹಿಂದೆಯೂ ಎರಡು ಬಾರಿ ಪೊಲೀಸರು ಹಿಡಿಯಲು ಬಂದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದರು ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ನಡುವೆ ಕುಣಿಗಲ್ ಮತ್ತು ಬೆಂಗಳೂರು ಹೊರವಲಯದ ಆಚಾರ್ಯ ಕಾಲೇಜು ಸಮೀಪ ಹಂತಕರಾದ ಹರೀಶ್ಬಾಬು ಹಾಗೂ ಮಧುನನ್ನು ಶನಿವಾರ ತಡರಾತ್ರಿ ಪೊಲೀಸ್ ಎನ್ಕೌಂಟರ್ ಮಾಡಿದ್ದಾರೆಂಬ ವದಂತಿ ಹಬ್ಬಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಎನ್ಕೌಂಟರ್ ವಿಚಾರ ಸುಳ್ಳು.
ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಇದುವರೆಗೂ ಮಹತ್ವದ ಸುಳಿವು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಗದೀಶ್ ಕುಟುಂಬದಲ್ಲಿ ಸೂತಕ: ಪತಿ ಆದರ್ಶಗಳೇ ಮಕ್ಕಳಿಗೆ ದಾರಿ ದೀಪ ಶುಕ್ರವಾರ ಬೈಕ್ ಕಳ್ಳರ ಕಾರ್ಯಾಚರಣೆ ವೇಳೆ ಕಳ್ಳನಿಂದ ಇರಿತಕ್ಕೊಳಗಾಗಿ ಹುತಾತ್ಮ ರಾಗಿರುವ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಜಗದೀಶ್ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಕುರಿತಂತೆ ಮಾತನಾಡಿರುವ ಕುಟುಂಬದ ಸದಸ್ಯರು ತಮ್ಮ ಮನದ ದುಗುಡ ಹಂಚಿಕೊಂಡರು.
ಬೈಕ್ ಕಳ್ಳರ ಕಾರ್ಯಾಚರಣೆ ಬಗ್ಗೆ ನನ್ನೊಂದಿಗೆ ಮಾತನಾಡಿ ಕೆಲಸ ಮುಗಿಸಿ ಬೇಗ ಬರುತ್ತೇನೆಂದು ಹೇಳಿ ಹೋಗಿದ್ದವರು ಕೊನೆಗೂ ಬರಲೇ ಇಲ್ಲ ಎಂದು ಮೃತ ಜಗದೀಶರ ಪತ್ನಿ
ರಮಾ್ಯ ಕಣ್ಣೀರಿಟ್ಟರು. ನನ್ನ ಗಂಡ ದೊಡ್ಡ ಕುಟುಂಬ ಬಿಟ್ಟು ಹೋಗಿ ದ್ದಾರೆ. ಇನ್ನು ಮುಂದೆ ಅವರ ಆದರ್ಶಗಳೇ ನನಗೆ ಮತ್ತು ಮಕ್ಕಳಿಗೆ ದಾರಿ ದೀಪ ಎಂದು ನೊಂದು ನುಡಿದರು.
ಇನ್ನು ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ಶ್ರೀನಿವಾಸಯ್ಯ ಕಮಲಮ್ಮ ದಂಪತಿ, ನನ್ನ ಮಗನ ಬಲಿದಾನದ ನೆನಪಿಗಾಗಿ ಪ್ರಶಸ್ತಿ ನೀಡಬೇಕು. ನಮ್ಮ ಮಗನಂತ ಮಗ ಯಾರಿಗೂ ಹುಟ್ಟಲು ಸಾಧ್ಯವಿಲ್ಲ. ಆದರ್ಶವಂತ ಮಗನನ್ನು ಕಳೆದು ಕೊಂಡು ಬದುಕು ಬರಡಾಗಿದೆ. ಸರ್ಕಾರ ಒಬ್ಬ ನೌಕರನಿಗೆ ಕೊಡ ಬಹುದಾದ ಸಾಮಾನ್ಯ ಸೌಲಭ್ಯ ಕೊಡುತ್ತಿದೆ.
ಮಗ ಕರ್ತವ್ಯದಲ್ಲಿದ್ದಾಗಲೇ ಪ್ರಾಣ ಕಳೆದುಕೊಂಡಿದ್ದಾನೆ. ಪತ್ನಿ, ಇಬ್ಬರು ಮಕ್ಕಳಿದ್ದು ಇವರ ಮುಂದಿನ ಭವಿಷ್ಯಕ್ಕೆ ಹೆಚ್ಚಿನ ನೆರವು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಪೊಲೀಸ್ ಇಲಾಖೆ ಹೆಚ್ಚಿನ ಪರಿ ಹಾರಕ್ಕೆ ಗಮನ ಹರಿಸಬೇಕೆಂದು ಮೃತ ಎಸ್ಐ ತಂದೆ ನಿವೃತ್ತ ಎಎಸ್ಐ ಶ್ರೀನಿವಾಸಯ್ಯ ಆಗ್ರಹಿಸಿದರು. ಈ ವೇಳೆ ಮಗನನ್ನು ನೆನೆದು ಕಣ್ಣೀರಿಟ್ಟರು
Advertisement