ಪುಸ್ತಕ ಮೇಳಕ್ಕಾಗಿ ಸಂಘರ್ಷಿಸಬೇಕು: ಚಂದ್ರಶೇಖರ ಕಂಬಾರ
ಬೆಂಗಳೂರು: ``ಯಾವುದೇ ಪ್ರದೇಶದಲ್ಲಿ ಪುಸ್ತಕೋತ್ಸವ ಆಯೋಜಿಸಿದರೆ ಆ ಊರಿನ ಹಿರಿಮೆ ವೃದ್ಧಿಸುತ್ತದೆ. ಆದರೆ ನಾಡಿನಲ್ಲಿ ಪುಸ್ತಕ ಮೇಳ ಆಯೋಜಿಸಲು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯಬೇಕಾದ ಪರಿಸ್ಥಿತಿ ಇದೆ. ಇದೊಂದು ದುರಂತ ಸಂಗತಿ. ಈ ಬೆಳವಣಿಗೆ ಸರ್ಕಾರಕ್ಕೆ ಶೋಭೆ ತಾರದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಚಂದ್ರಶೇಖರ ಕಂಬಾರ ವಿಷಾದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಇಂಡಿಯಾ ಪ್ರಾಯೋಜಿಕತ್ವದಲ್ಲಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಪುಸ್ತಕೋತ್ಸವ
ಕಾರ್ಯಕ್ರಮ ಉದ್ಘಾಟಿಸಿದ ಅವರು, ``ಪುಸ್ತಕಗಳು ಸಂಸ್ಕೃತಿಯ ಜೀವಾಳ. ಮೇಳ ಹಮ್ಮಿಕೊಳ್ಳಲು ಸರ್ಕಾರ ಆಸ್ಪದ ನೀಡದಿರುವುದು ನೋವಿನ ಸಂಗತಿ. 10 ದಿನಗಳ ವರೆಗೆ ಈ ಮೇಳ ನಡೆದು ಕನ್ನಡ ಸಂಸ್ಕೃತಿಯ ವಾರ್ಷಿಕ ಹಬ್ಬವಾಗಬೇಕು. ಪುಸ್ತಕ ಓದಿದಷ್ಟು ಜ್ಞಾನದ ಅರಿವಿನ ಆಳ ಹೆಚ್ಚು-ತ್ತದೆ,'' ಎಂದು ತಿಳಿಸಿದರು.
ಪ್ರಕಾಶಕರ ಒಕ್ಕೂಟ ಮತ್ತು ಭಾರತದ ಪುಸ್ತಕ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ಸಿ. ಸೇಠಿ ಮಾತನಾಡಿ, ``ಪ್ರಜೆಗಳಿಗೆ ಜ್ಞಾನ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ಇಲ್ಲಿನ ಸರ್ಕಾರ ಪುಸ್ತಕ ಮೇಳ ಆಟೋಜಿಸಲು ಸ್ಥಳ ನೀಡಲು ಮೀನಾಮೇಷ ಎಣಿಸುತ್ತಿದೆ. ತಮಿಳುನಾಡು ಸರ್ಕಾರ ಪುಸ್ತಕ ಮೇಳ ಆಯೋಜಿಸಲು ಉಚಿತ ಸ್ಥಳ ನೀಡುತ್ತದೆ. ಆದರೆ ಇಲ್ಲಿನ ಸರ್ಕಾರದ ನಡೆಯೇ ಭಿನ್ನ. ಪೋಷಕರು ಮಕ್ಕಳಿಗೆ ಚಾಕೊಲೆಟ್ ಕೊಡುವ ಬದಲಿಗೆ ಪ್ರತಿ ತಿಂಗಳು ಒಂದೊಂದು ಪುಸ್ತಕವನ್ನು ಕೊಡೆಗೆಯಾಗಿ ಕೊಡಲಿ ಎಂದರು.
ಬರಹಗಾರ್ತಿ ಅನಿತಾ ನಾಯರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ರಜನಿ ಮಿಶ್ರಾ, ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿತಿನ್ ಷಾ, ಕಾರ್ಯದರ್ಶಿ ದೇವರು ಭಟ್ ಮತ್ತು ಪ್ರೊಗ್ರಾಮ್ ಡೈರೆಕ್ಟರ್ ಬಿ.ಎಸ್. ರಘುರಾಮ್ಇದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ