ಕಸದ ಕಿರಿಕಿರಿ ಕಂಡು ಶಾಸಕ ಉರಿಉರಿ

`ನೀವು ಕಸ ತೆಗೆಸುತ್ತೀರೋ, ಇಲ್ಲ ನಾವೇ ನಮ್ಮ ಜನರನ್ನು ಬಿಟ್ಟು ಕಸ ತೆಗೆಸಬೇಕೇ...?' ಹೀಗೆಂದು ಬಿಬಿಎಂಪಿ ಅಧಿಕಾರಿಗಳನ್ನು ಶಾಸಕ ಎಸ್.ಟಿ.ಸೋಮಶೇಖರ್ ಮಂಗಳವಾರ ತರಾಟೆಗೆ ತೆಗೆದುಕೊಂಡರು. ಯಶವಂತಪುರ ವಿಧಾನಸಭಾ ಕ್ಷೇತ್ರದ ತ್ಯಾಜ್ಯ ಸಂಸ್ಕರಣ...
ಶಾಸಕ ಎಸ್.ಟಿ.ಸೋಮಶೇಖರ್ (ಸಂಗ್ರಹ ಚಿತ್ರ)
ಶಾಸಕ ಎಸ್.ಟಿ.ಸೋಮಶೇಖರ್ (ಸಂಗ್ರಹ ಚಿತ್ರ)

ಬೆಂಗಳೂರು: `ನೀವು ಕಸ ತೆಗೆಸುತ್ತೀರೋ, ಇಲ್ಲ ನಾವೇ ನಮ್ಮ ಜನರನ್ನು ಬಿಟ್ಟು ಕಸ ತೆಗೆಸಬೇಕೇ...?' ಹೀಗೆಂದು ಬಿಬಿಎಂಪಿ ಅಧಿಕಾರಿಗಳನ್ನು ಶಾಸಕ ಎಸ್.ಟಿ.ಸೋಮಶೇಖರ್ ಮಂಗಳವಾರ ತರಾಟೆಗೆ ತೆಗೆದುಕೊಂಡರು. ಯಶವಂತಪುರ ವಿಧಾನಸಭಾ ಕ್ಷೇತ್ರದ ತ್ಯಾಜ್ಯ ಸಂಸ್ಕರಣ ಘಟಕಗಳಿಂದ ದುರ್ವಾಸನೆ ಬರುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ವಾಸಿಸಲು ಸಾಕಷ್ಟು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಬಂದ ದೂರಿನ ಅನುಸಾರ ಮಂಗಳವಾರ ಸಚಿವ ರಾಮಲಿಂಗಾ ರೆಡ್ಡಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳನು ಶಾಸಕರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿ, ಆಯುಕ್ತ ಕುಮಾರ್ ನಾಯಕ್ ಸೇರಿದಂತೆ ವಲಯ ಜಂಟಿ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡು ಸುಮಾರು ಎರಡು ತಾಸು ಈ ವಿಚಾರವಾಗಿಯೇ ಚರ್ಚಿಸಿದರು.

ನಿರ್ವಹಣಾ ಘಟಕಗಳ ನಿರ್ಮಾಣ ಹಂತದಲ್ಲಿ ಬಿಬಿಎಂಪಿ ಯಾವುದೇ ದುರ್ವಾಸನೆ ಬರುವುದಿಲ್ಲ ಎಂದು ಭರವಸೆ ನೀಡಿ, ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಿತ್ತು. ಆದರೆ, ಈಗ ಇವುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ದುರ್ನಾತ ಬರುತ್ತಿದ್ದು ನಾಗರಿಕರಿಗೆ ಸ್ಥಳೀಯ ಶಾಸಕನಾಗಿ ನಾನು ಉತ್ತರ ಕೊಡಲು ಆಗುತ್ತಿಲ್ಲ ಎಂದು ಗಂಭೀರ ದನಿಯಲ್ಲಿ ಹೇಳಿದರು. ಅಲ್ಲದೇ, ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ತಿಳಿಸಿ ಎಂದು ಏರಿದ ದನಿಯಲ್ಲಿ ಹೇಳಿದಾಗ ಅಧಿಕಾರಿಗಳು ತಲೆ ತಗ್ಗಿಸಿದರು.

ಅಧಿಕಾರಿಗಳು ಮತ್ತು ಎಂಜಿನಿಯರ್ ಗಳು ಕಚೇರಿಯಲ್ಲಿ ಕುಳಿತು ಕಸದ ಸಮಸ್ಯೆ ಇಲ್ಲ ಎಂದು ಹೇಳುವುದು ಸರಿಯಲ್ಲ. ಕ್ಷೇತ್ರದಲ್ಲಿ ಒಂದು ಸಾವಿರ ಲಾರಿ ಲೋಡುಗಳ ಕಸ ಬಾಕಿ ಉಳಿಯಲಿದೆ. ಈ ವಿಷಯವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕು. ದಿನದ 24 ಗಂಟೆಯೂ ಕಾರ್ಯನಿರ್ವಹಿಸಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಆಧುನಿಕ ತಂತ್ರಜ್ಞಾನದಿಂದ ವಾಸನೆ ಬಾರದ ರೀತಿಯಲ್ಲಿ ಸಂಸ್ಕರಣೆ ಮಾಡಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. 15 ದಿನಗಳೊಳಗೆ ಕಸ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ ಕ್ಷೇತ್ರದ ಜನತೆಯ ಜೊತೆಗೂಡಿತಾವೇ ಖುದ್ದು ಪ್ರತಿಭಟಿಸಬೇಕಾಗುತ್ತದೆ. ಮುಂದೆ ಕಸ ಹಾಕಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಭಾಗದಲ್ಲಿ ಕಸ ಸಮಸ್ಯೆ ಇತ್ತು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೂಡಲೇ ಕಸ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com