ದಸರಾ ಜಂಬೂಸವಾರಿ ತಡವಾಗಿ ಆರಂಭಗೊಳ್ಳಲು ಏನು ಕಾರಣ?

ಈ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಿಗದಿತ ಮೂಹೂರ್ತದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ನಡೆಯಬೇಕಿತ್ತು. ಆದರೆ ಅದು ಆಗಲಿಲ್ಲ. ತಡವಾಗಿ ನಡೆಯಿತು...
ಜಂಬೂ ಸವಾರಿ (ಸಂಗ್ರಹ ಚಿತ್ರ)
ಜಂಬೂ ಸವಾರಿ (ಸಂಗ್ರಹ ಚಿತ್ರ)

ಮೈಸೂರು: ನಾಡಹಬ್ಬ ಜಗತ್ ಪ್ರಸಿದ್ದ ಮೈಸೂರು ದಸರಾ ಮುಗಿದಿದೆ. ದಸರಾ ಜಂಬೂಸವಾರಿ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಆನೆಗಳು ವಾಪಸ್ ಅವುಗಳ ಶಿಬಿರ ತಲುಪಿವೆ.

ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಈ ಬಾರಿ ದಸರಾ ಅನೇಕ ಪ್ರಶ್ನೆಗಳನ್ನು ಉಳಿಸಿಹೋಗಿದೆ. ಸಾಗರೋಪಾದಿಯಲ್ಲಿ ಬಂದ ಪ್ರವಾಸಿಗರು ಜಂಬೂಸವಾರಿ ವೀಕ್ಷಿಸಿ ಸುತ್ತಮುತ್ತಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಖುಷಿ ಪಡುತ್ತಾ ತಮ್ಮ ಊರಿನ ಹಾದಿ ಹಿಡಿದಿದ್ದಾರೆ. ಆದರೆ ಜಂಬೂಸವಾರಿಯ ಸಂದರ್ಭ ನಡೆದ ಕೆಲವೊಂದು ಪ್ರಮಾದಗಳು ಇದೀಗ ನಿಧಾನವಾಗಿ ಹೊರಬರುತ್ತಿವೆ.

 ಈ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ನಿಗದಿತ ಮೂಹೂರ್ತದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ನಡೆಯಬೇಕಿತ್ತು. ಆದರೆ ಅದು ಆಗಲಿಲ್ಲ. ತಡವಾಗಿ ನಡೆಯಿತು. ಅಂಬಾರಿಗೆ ವಿಮೆ ಮಾಡಿಸುವಲ್ಲಿನ ಗೊಂದಲವೇ ಮುಖ್ಯ ಕಾರಣ. ಪ್ರತಿ ದಸರಾ ಜಂಬೂಸವಾರಿಯಂದು ಅಂಬಾರಿಗೆ ಸುರಕ್ಷತೆಯ ದೃಷ್ಟಿಯಿಂದ ವಿಮೆ ಮಾಡಿಸಲಾಗುತ್ತದೆ. ಈ ಬಾರಿಯೂ ಸುಮಾರು 15ಕೋಟಿ ವಿಮೆ ಮಾಡಿಸಲಾಗಿತ್ತು.

ಪ್ರತಿ ವರ್ಷ ವಿಮೆಯನ್ನು ರಾಜಮನೆತನದ ಹೆಸರಿನಲ್ಲಿ ಮಾಡಲಾಗುತ್ತದೆ. ಆದರೆ ಈ ಬಾರಿ ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ವಿಮೆ ಮಾಡಿಸಲಾಗಿತ್ತು. ಹಿಂದಿನ ಸಂಪ್ರದಾಯವನ್ನು ಮುರಿದಿದ್ದು, ರಾಣಿ ಪ್ರಮೋದಾದೇವಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಬೇಸರಗೊಂಡ ಅವರು ರಾಜಮಹಲ್ ಸೇರಿದ್ದರು. ಆದರೆ ಜಿಲ್ಲಾಧಿಕಾರಿ ಶಿಖಾ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಗಣ್ಯರೊಂದಿಗೆ ಆಸೀನರಾಗಿದ್ದರು.

ರಾಣಿ ಪ್ರಮೋದಾದೇವಿ ಅವರು ಅಸಮಾಧಾನಗೊಂಡಿದ್ದನ್ನು ತಿಳಿದ ಕೆಲವರು ಅವರನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಅರ್ಜುನನಿಗೆ ಅಂಬಾರಿ ಕಟ್ಟುವುದು ತಡವಾಯಿತು. ಈ ನಡುವೆ ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ತೆರಳಿ ಪ್ರಮೋದಾ ದೇವಿಯವರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಸಮ್ಮತಿಸಿದರು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com