ಬೆಂಗಳೂರು: ಜ್ಞಾನಭಾರತಿ ಸಮೀಪದ ಮರಿಯಪ್ಪನಪಾಳ್ಯದ ಮಣಪ್ಪುರಂ ಗೋಲ್ಡ್ ಲೋನ್ ಸಂಸ್ಥೆಯಲ್ಲಿ ಅ. 16 ರಂದು ಹಗಲು ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಸುರೇಶ್, ಧನಶೇಖರ್, ರಾಮು, ಸುರೇಶ್ ಹಾಗೂ ವಿನೋದ್ ಬಂಧಿತರು. ಆರೋಪಿಗಳಿಂದ ಸುಮಾರು ರೂ.2 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮರಿಯಪ್ಪನ ಪಾಳ್ಯದಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಗೆ ಶುಕ್ರವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಕಿ ಕ್ಯಾಪ್ ಧರಿಸಿ ಒಳಗೆ ನುಗ್ಗಿದ್ದ ಆರೋಪಿಗಳು ರೂ.1.5 ಲಕ್ಷ ನಗದು ಹಾಗೂ ರೂ. ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಮೊಬೈಲ್ ನೀಡಿದ್ದ ಸುಳಿವು?: ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಜ್ಞಾನ ಭಾರತಿ ಹಾಗೂ ಮರಿಯಪ್ಪನ ಪಾಳ್ಯ ಸರಹದ್ದಿನ ಮೊಬೈಲ್ ಟವರ್ಗಳಿಂದ ಸಂಪರ್ಕ ಪಡೆದ ಮೊಬೈಲ್ ಸಂಖ್ಯೆಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆಗ ಕೃತ್ಯ ನಡೆದ ವೇಳೆ ಮಳಿಗೆಯಲ್ಲೇ ಆರೋಪಿ ಸುರೇಶ್ನ ಮೊಬೈಲ್ ಫೋನ್ ಟವರ್ ಲೊಕೇಶನ್ ಸಿಕ್ಕಿತ್ತು. ಆ ಮೊಬೈಲ್ ಫೋನ್ ಸಂಖ್ಯೆ ವಿಳಾಸ ಆಧಾರಿಸಿ ಸುರೇಶ್ ನನ್ನು ವಶಕ್ಕೆ ಪಡೆದಿದ್ದರು. ಬಳಿಕ ಉಳಿದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಮಾಹಿತಿ ಆಧರಿಸಿ ದೋಚಿದ್ದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಯಲ್ಲಿ ದರೋಡೆಗೆ ತಮಿಳು ಸಿನಿಮಾವೊಂದು ಪ್ರೇರಣೆ ನೀಡಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆಂದು ತಿಳಿದು ಬಂದಿದೆ.
Advertisement