ರಾಯಚೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಲಿ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ್ವತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಅವರೇ ಐದು ವರ್ಷ ಆಡಳಿತ ನಡೆಸಲಿ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕೀಯ ಬಿಟ್ಟು ಬರುವುದು ಬೇಡ.ಸಚಿವ ಸಂಪುಟದ ವಿಸ್ತರಣೆಯಲ್ಲಿ ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನೀಡಲಿ,ಇದರಿಂದ ದಲಿತರು ಸಹ ಸಂತೋಷ ಪಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಶ್ರೀ ರಾಮಚಂದ್ರಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಶ್ರೀಗಳು ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಹೇಳುತ್ತಿದ್ದು, ಈ ಕುರಿತು ಸರಕಾರ ತನಿಖೆ ನಡೆಸಿ ಸತ್ಯ ಬಯಲಿಗೆ ಎಳೆಯಬೇಕು. ಅಲ್ಲಿ ತನಕ ಶ್ರೀಗಳು ಪೀಠ ತ್ಯಾಗ ಮಾಡುವುದು ಬೇಡ.ನ್ಯಾಯಾಲಯ ನೀಡುವ ತೀರ್ಪಿನ ಆಧಾರದ ಮೇಲೆ ಪೀಠದಿಂದ ಕೆಳಗೆ ಇಳಿಸುವುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದರು.
ಸೋಸಲೆ ವ್ಯಾಸರಾಜ ಮಠದಲ್ಲಿ ಬೆಳ್ಳಿ ರಥ ಕಳವು ಆರೋಪದ ಮೇಲೆ ಮಠದ ಸ್ವಾಮೀಜಿ
ವಿದ್ಯಾ ಮನೋಹರ ತೀರ್ಥರು, ಅವರ ಶಿಷ್ಯ ಹಾಗೂ ತಾಯಿಯನ್ನು ಪೊಲೀಸರು ಬಂಧಿಸಿರುವುದು ಖಂಡನೀಯ. ಒಂದು ಮಠದ ಸ್ವಾಮಿಯನ್ನು ಬಂಧಿಸುವುದರಿಂದ ಭಕ್ತರಿಗೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಕಳವು ಪ್ರಕರಣ ಬರೀ ಆರೋಪದಡಿ ಮಠದ ಸ್ವಾಮಿಯನ್ನು ವಶಕ್ಕೆ ಪಡೆಯುವುದರ ಬದಲು ತನಿಖೆ ನಡೆಸಿ ತಪ್ಪಿತಸ್ಥರು ಎಂದು ಖಚಿತವಾದ ಬಳಿಕ ಬಂಧಿಸುವುದು ಸೂಕ್ತವೆಂದು ಪೇಜಾವರ ಶ್ರೀಗಳು ತಿಳಿಸಿದರು.
Advertisement