ಕ್ಯಾಮೆರಾ, ಭದ್ರತೆ ಇಲ್ಲದಿದ್ದರೆ ಕ್ರಿಮಿನಲ್ ಕೇಸ್: ಮೇಘರಿಕ್

ಚಿನ್ನಾಭರಣ ಅಡ ಇಟ್ಟುಕೊಳ್ಳುವ ಸಂಸ್ಥೆಗಳು ಕಡ್ಡಾಯವಾಗಿ ಸೆಕ್ಯುರಿಟಿ ಗಾರ್ಡ್ ನೇಮಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು.
ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್
ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್

ಬೆಂಗಳೂರು: ಚಿನ್ನಾಭರಣ ಅಡ ಇಟ್ಟುಕೊಳ್ಳುವ ಸಂಸ್ಥೆಗಳು ಕಡ್ಡಾಯವಾಗಿ ಸೆಕ್ಯುರಿಟಿ ಗಾರ್ಡ್ ನೇಮಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಯಾಂಕ್, ಎಟಿಎಂ ಕೇಂದ್ರಗಳು, ಆಭರಣ ಮಳಿಗೆಗಳು ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ಭದ್ರತಾ ಕ್ರಮ ಕೈಗೊಳ್ಳಬೇಕು ಎನ್ನುವ ನಿಯಮ ಜಾರಿಯಲ್ಲಿದೆ. ಆದರೆ ಕಾಸ್ಟ್ ಕಟಿಂಗ್ ನೆಪದಲ್ಲಿ ಮಣಪ್ಪುರಂ ಸೇರಿದಂತೆ ಬಹುತೇಕ ಸಂಸ್ಥೆಗಳು ಭದ್ರತಾ ಕ್ರಮ ಕೈಗೊಂಡಿಲ್ಲ. ಕೆಲವೊಂದು ಕಡೆ ನಾಮ್ ಕೆ ವಾಸ್ತೇ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅದರಲ್ಲಿ ಯಾವ ವ್ಯಕ್ತಿ ಬಂದು ಹೋದರೂ ಗೊತ್ತಾಗುವುದಿಲ್ಲ. ಇದು ದರೋಡೆಕೋರರ ಪಾಲಿಗೆ ವರವಾಗಿ ಪರಿಣಮಿಸುತ್ತಿದೆ.
ಇಂತಹ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ನಂಬಿಕೆ ಮೇಲೆ ಆಭರಣ ಇಟ್ಟಿರುತ್ತಾರೆ. ಅದಕ್ಕೆ ಸೂಕ್ತ ರಕ್ಷಣೆ ನೀಡದೇ ಸಂಸ್ಥೆ ಸಾರ್ವಜನಿಕರಿಗೆ ನಂಬಿಕೆ ದ್ರೋಹ ಮಾಡಿದಂತೆ. ಇಂತಹ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.
ಭಾರಿ ಹಣಕಾಸು ವ್ಯವಹಾರ, ಆಭರಣ ಮಳಿಗೆಗಳು ಯಾವ ರೀತಿ ಸುರಕ್ಷತಾ ಕ್ರಮ ಕೈಗೊಂಡಿರಬೇಕು ಎನ್ನುವುದು ನಿರ್ಧರಿತವಾಗಿದೆ. ಆದರೂ ಸಂಸ್ಥೆಗಳು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಹೀಗಾಗಿ ಅಂತಹ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಕ್ರಮ ಎದುರಿಸಲು ಸಿದ್ಧವಾಗಬೇಕಾಗುತ್ತದೆ ಎಂದು ಆಯುಕ್ತರು ಹೇಳಿದರು.
13 ಕೆ.ಜಿ ಚಿನ್ನ ವಶ: ಮಣಪ್ಪುರಂ ಗೋಲ್ಡನ್ ಲೋನ್ ನಲ್ಲಿ ಕಳವಾಗಿದ್ದ 15 ಕೆಜಿ ಚಿನ್ನಾಭರಣ ಕಳವು ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಿರುವ ನಗರ ಪೊಲೀಸರು 13 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ದರೋಡೆ ಬಳಿಕ ಆಭರಣಗಳನ್ನು ಹಂಚಿಕೊಂಡಿದ್ದ ಆರೋಪಿಗಳ ಪೈಕಿ ಕೆಲವರು ತಮ್ಮ ಗೆಳತಿಯರಿಗೆ ಆಭರಣ ಉಡುಗೊರೆ ನೀಡಿದ್ದರು. ಕೆಲವರು ಒಡವೆಗಳನ್ನು ಅಡ ಇಟ್ಟು ಹಣ ತೆಗೆದುಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com