ಭಾಷಾ ಪತ್ರಿಕೆಗಳಿಗೆ ಉಜ್ವಲ ಭವಿಷ್ಯ: ರವಿ

ವಿದ್ಯುನ್ಮಾನ ಮಾಧ್ಯಮಗಳಿಂದ ಎಷ್ಟೇ ಸವಾಲುಗಳು ಎದುರಾದರೂ ಭಾಷಾ ಪತ್ರಿಕೆಗಳಿಗೆ ಉಜ್ವಲ ಭವಿಷ್ಯವಿದೆ
ಭಾಷಾ ಪತ್ರಿಕೆ ವಿಚಾರಯ ಸಂಕಿರಣದಲ್ಲಿ ಹೆಚ್ಎಂ ರೇವಣ್ಣ- ಡಾ.ಬಿ.ಕೆ ರವಿ
ಭಾಷಾ ಪತ್ರಿಕೆ ವಿಚಾರಯ ಸಂಕಿರಣದಲ್ಲಿ ಹೆಚ್ಎಂ ರೇವಣ್ಣ- ಡಾ.ಬಿ.ಕೆ ರವಿ

ಬೆಂಗಳೂರು: ವಿದ್ಯುನ್ಮಾನ ಮಾಧ್ಯಮಗಳಿಂದ ಎಷ್ಟೇ ಸವಾಲುಗಳು ಎದುರಾದರೂ ಭಾಷಾ ಪತ್ರಿಕೆಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಬೆಂಗಳೂರು ವಿವಿ ಸಮೂಹ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ ರವಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಭಾಷಾ ಪತ್ರಿಕೆಗಳ ಸಂಘ(ಇಲ್ನಾ) ನಗರದ ಖಾಸಗಿ ಹೊಟೇಲ್ ನಲ್ಲಿ ಭಾರತದಲ್ಲಿ ಭಾಷಾ ಪತ್ರಿಕೋದ್ಯಮದ ಭವಿಷ್ಯ ಮತ್ತು ಸವಾಲುಗಳು ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಅಷ್ಟೊಂದು ಪ್ರವರ್ಧಮಾನಕ್ಕೆ ಬಾರದಿದ್ದ ಕಾಲದಲ್ಲಿ ಮುದ್ರಣ ಮಾಧ್ಯಮ ಸಾಕಷ್ಟು ಸವಾಲುಗಳ ನಡುವೆ ಅಸ್ತಿತ್ವ ಕಾಪಾಡಿಕೊಂಡಿತು. ಟೆಲಿವಿಷನ್ ಆಗಮನ ಆಗಿದ್ದೇ ತಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾದವು. 90 ರ ದಶಕದಲ್ಲಿ ಸಮಾಜ ಸೇವೆಯಾಗಿದ್ದ ಪತ್ರಿಕೋದ್ಯಮ ಜಾಗತೀಕರಣದ ಬಳಿಕ ಉದ್ಯಮವಾಗಿ ಬದಲಾಯಿತು. ಪ್ರಸ್ತುತ ಇಂಗ್ಲೀಷ್ ಪತ್ರಿಕೆಗಳು ಹೆಚ್ಚು ಪ್ರಸರಣ ಹೊಂದಿದ್ದರೂ ಭಾರತೀಯ ಭಾಷಾ ಪತ್ರಿಕೆಗಳು ದೇಶದ ಹೆಚ್ಚು ಮಂದಿ ತಲುಪುತ್ತಿವೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಎಂ ರೇವಣ್ಣ ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಬಿಂಬಿತವಾಗಿರುವ ಪತ್ರಿಕೋದ್ಯಮಕ್ಕೆ ಪ್ರಮುಖ ಸ್ಥಾನವಿದೆ. ಟೆಲಿವಿಷನ್ ಮಾಧ್ಯಮಗಳು ಬಂದಾಗ ಪತ್ರಿಕೆಗಳಿಗೆ ಹೊಡೆತ ಬೀಳಲಿದೆ ಎಂದು ಭಾವಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳು ಹುಸಿಯಾದವು. ಟೆಲಿವಿಷನ್ ನಲ್ಲಿ ಪ್ರಸಾರವಾಗುವ ಸುದ್ದಿಗಳು ಹೆಚ್ಚು ಕಾಲ ಸ್ಮೃತಿಪಟಲದಲ್ಲಿ ಉಳಿಯುವುದಿಲ್ಲ. ಅದೇ ಪತ್ರಿಕೆಗಳ ಸುದ್ದಿಗಳು ಹೆಚ್ಚು ಕಾಲ ಉಳಿಯುತ್ತವೆ. ಹೀಗಾಗಿ ಜನ ಪತ್ರಿಕೆಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಇಲ್ನಾ ಅಧ್ಯಕ್ಷ ಪರೇಶನಾಥ್, ಕಾರ್ಯದರ್ಶಿ ಎಸ್.ನಾಗಣ್ಣ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ, ಪತ್ರಕರ್ತ ರವಿ ಹೆಗಡೆ ಮತ್ತಿತರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com