ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣ ಭೇದಿಸಲು ಡಿ.ಸಿ. ರಾಜಪ್ಪ ನೇತೃತ್ವದ ಸಿಐಡಿ ತಂಡ ಮಂಗಳವಾರ ಮಹಾನಗರಕ್ಕೆ ಆಗಮಿಸಿದ್ದು, ತನಿಖೆ ತೀವ್ರಗೊಳಿಸಿದೆ.
ಬೆಳಗ್ಗೆ ನವನಗರದ ಕಮೀಶನರೇಟ್ ಕಚೇರಿಯಲ್ಲಿ ಪೊಲೀಸ್ ಕಮೀಶನರ್ ಪಾಂಡುರಂಗ ರಾಣೆ ಮತ್ತು ಹಿರಿಯ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಮಾಹಿತಿ ಪಡೆದ ಸಿಐಡಿ ತಂಡ ನೇರವಾಗಿ ಮಧ್ಯಾಹ್ನ 3ಕ್ಕೆ ಕಲ್ಯಾಣ ನಗರದಲ್ಲಿನ ಕಲಬುರ್ಗಿ ಅವರ ನಿವಾಸಕ್ಕೆ ತೆರಳಿತು.
ಘಟನೆ ದಿನ ಮನೆಯಲ್ಲಿದ್ದ ಕಲಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಪುತ್ರಿ ರೂಪದರ್ಶಿ ಅವರೊಂದಿಗೆ ರಾಜಪ್ಪ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಶೂಟೌಟ್ ಆದ ಸ್ಥಳ, ಸುತ್ತಮುತ್ತಲಿನ ಪ್ರದೇಶ ಎಲ್ಲವನ್ನೂ ಪರಿಶೀಲಿಸಿದರು. ಕಲಬುರ್ಗಿ ಅವರ ಹತ್ಯೆ ಮಾಡಿದ ವ್ಯಕ್ತಿಯ ಚಹರೆ, ಗುರುತಿನ ಕಲೆ, ವರ್ತನೆ, ಈ ಹಿಂದೆ ಆತನನ್ನು ನೋಡಿದ ನೆನಪಿದೆಯೇ ಎಂಬ ಕುರಿತು ಮಾಹಿತಿ ಕಲೆ ಹಾಕಿದರು. ಹತ್ಯೆ ನಡೆದ ಸ್ಥಳ, ನಡೆದ ಬಗೆ ಮತ್ತಿತರ ಅಂಶಗಳ ಕುರಿತಾಗಿ ಮಾಹಿತಿ ಪಡೆದರು.
ಈ ಕುರಿತು ಪತ್ರಕರ್ತರು ರಾಜಪ್ಪ ಅವರನ್ನು ಪ್ರಶ್ನಿಸಿದಾಗ, ಸಿಐಡಿ ಅಧಿಕಾರಿಗಳು ಮಾತಿಗಿಂತ ಕೆಲಸ ಹೆಚ್ಚು ಮಾಡುತ್ತಾರೆ ಎಂದಷ್ಟೇ ಹೇಳಿ ಕಾರು ಏರಿದರು. ಸಿಐಡಿ ತಂಡ ಕಲಬುರ್ಗಿ ಮನೆಗೆ ಬರುವ ಮೊದಲೇ ಆಂತರಿಕ ಭದ್ರತಾ ವಿಭಾಗದ ಇನ್ ಸ್ಪೆಕ್ಟರ್ ಗಿರೀಶ ಬೋಜನ್ನವರ, ವಿಶೇಷ ತನಿಖಾ ತಂಡದ ವಾಸುದೇವ ನಾಯಕ್, ಬೆಳಗಾವಿ ಎಸ್ಪಿ ರವಿಕಾಂತೇಗೌಡ ಕುಟುಂಬದ ಸದಸ್ಯರ ಬಳಿ ಮಾಹಿತಿ ಸಂಗ್ರಹಿಸಿದ್ದರು.
Advertisement