49ನೇ ದಿನಕ್ಕೆ ಕಾಲಿಟ್ಟ ಧರಣಿ ,ರೈತ ಮುಖಂಡ ಕುರುಬೂರು ಶಾಂತಕುಮಾರ್ ಕಿವಿಮಾತು

ರೈತ ಸಮುದಾಯ ತಮ್ಮ ಸೌಲಭ್ಯ ಕೇಳಲು ಹೋರಾಟ ಮಾಡಿದರೆ ಅಂಥ ಹೋರಾಟದ ಚಳವಳಿ ಹತ್ತಿಕ್ಕುವ ರಾಜಕಾರಣಿಗಳಿದ್ದಾರೆ. ರೈತರು ಎಚ್ಚರದಿಂದ ಇರಬೇಕು...
ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್

ನರಗುಂದ: ರೈತ ಸಮುದಾಯ ತಮ್ಮ ಸೌಲಭ್ಯ ಕೇಳಲು ಹೋರಾಟ ಮಾಡಿದರೆ ಅಂಥ ಹೋರಾಟದ ಚಳವಳಿ ಹತ್ತಿಕ್ಕುವ ರಾಜಕಾರಣಿಗಳಿದ್ದಾರೆ. ರೈತರು ಎಚ್ಚರದಿಂದ ಇರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದರು.

ಅವರು ಬುಧವಾರ ಕಳಸಾ ಬಂಡೂರಿ ನಾಲಾ ಹಳ್ಳಗಳು ಮತ್ತು ಮಹದಾಯಿ ನದಿ ಮಲಪ್ರಭಾ ಜಲಾಶಯಕ್ಕೆ ಜೋಡಿಸಬೇಕೆಂದು ಆಗ್ರಹಿಸಿ ಸತತ 49ನೇ ದಿನದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಕೃಷಿಗೆ ಬೇಕಾದ ಸೌಲಭ್ಯ ಕೇಳಲು ರೈತರು ಹೋರಾಡುತ್ತಿದ್ದಾರೆ. ಆದರೆ, ರಾಜಕಾರಣಿಗಳು ರೈತ ಚಳವಳಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಹಸಿರು ಶಾಲು ಹಾಕಿಕೊಂಡು ತಾವು ರೈತರೆಂದು ತೋರಿಸಲೆತ್ನಿಸುವ ರಾಜಕಾರಣಿಗಳ ಬಗ್ಗೆ ಎಚ್ಚರ ವಹಿಸಿ ಎಂದರು. ರಾಜ್ಯದಲ್ಲಿ ಈ ವರ್ಷ ಬರ ಆವರಿಸಿದೆ, 400ಕ್ಕೂ ಹೆಚ್ಚು ರೈತರು ಸಾಲದ ಬಾಧೆ ತಾಳತಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡದೆ ರೈತರಿಗೆ ಅನ್ಯಾಯ
ಮಾಡಿದೆ. ಮಹಾರಾಷ್ಟ್ರದಲ್ಲಿ 300 ರೈತರು ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಲಾಗಿದೆ ಎಂದರು.

ಅನಾಥವಾದ ವೇದಿಕೆ: ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಂಗಳವಾರ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರಲ್ಲದೆ, ನಾಳೆಯಿಂದ ವೇದಿಕೆ ನೇತೃತ್ವ ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ, ಬುಧವಾರ ವೇದಿಕೆಗೆ ಅವರು ಬರಲೇ ಇಲ್ಲ, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಕಳಸಾ -ಬಂಡೂರಿ ನಾಲೆ, ಮಹದಾಯಿ ನದಿ ನೀರು ತಿರುವು ಯೊಜನೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಖಂಡಿಸಿ ಸೆ. 7ರಂದು ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲಾಗುವುದು.

 ಕುರುಬೂರು ಶಾಂತಕುಮಾರ್
ಕಬ್ಬುಬೆಳೆಗಾರರ ಹೋರಾಟ ಸಂಘದ ರಾಜ್ಯಾಧ್ಯಕ್ಷ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com