ಡಾ. ಕಲಬುರ್ಗಿ ಹತ್ಯೆ ಸಂಶೋಧನೆಗೇ ಗುಂಡಿಟ್ಟಂತೆ

ಯಾವುದೇ ಧರ್ಮದಲ್ಲಿ ಕಳ್ಳತನ, ಕೊಲೆ ಮಾಡು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ, ಕೆಲವೊಂದು ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರನ್ನು...
ಡಾ.ಎಂ.ಎಂ. ಕಲಬುರ್ಗಿ (ಸಂಗ್ರಹ ಚಿತ್ರ)
ಡಾ.ಎಂ.ಎಂ. ಕಲಬುರ್ಗಿ (ಸಂಗ್ರಹ ಚಿತ್ರ)

ಬೆಂಗಳೂರು: ಯಾವುದೇ ಧರ್ಮದಲ್ಲಿ ಕಳ್ಳತನ, ಕೊಲೆ ಮಾಡು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ, ಕೆಲವೊಂದು ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರನ್ನು ಕೊಲೆಗೈದಿರುವುದು ಸಂಶೋಧನೆಗೇ ಗುಂಡಿಟ್ಟಂತೆ ಎಂದು ನಾಡೋಜ ಡಾ.ಕಮಲಾ ಹಂಪನಾ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬನ್ ಪಾರ್ಕ್‍ನ ಎನ್‍ಜಿಒ ಭವನದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ಸಂಶೋಧಕರು ಯಾವ ದೃಷ್ಟಿಯಿಂದ ವಿಷಯವನ್ನು ನೋಡಿರುತ್ತಾರೆ ಎಂಬುದನ್ನು ತಿಳಿದು ಸತ್ಯವನ್ನು ಅರ್ಥೈಸಿಕೊಳ್ಳಬೇಕು. ಅರ್ಥವಾಗುವ ಮುನ್ನ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದರು.

ಸಂಶೋಧನೆಗೆ ಕೊನೆ ಇಲ್ಲ: ವೈದಿಕ ಧರ್ಮವೇ ಅಲ್ಲ, ವೀರಶೈವ ಲಿಂಗಾಯತ ಬೇರೆ, ವೀರಶೈವ ಅತ್ಯಂತ ಪ್ರಾಚೀನ ಧರ್ಮ ಎಂದು ಹೇಳಿದ್ದ ಕಲಬುರ್ಗಿ ಅವರು ಅದಕ್ಕೆ
ಪುರಾವೆಗಳನ್ನು ಒದಗಿಸಿದ್ದು. ಇಂಥಾ ಸಂಶೋಧನೆಗಳನ್ನು ಸ್ವಾಗತಿಸುವ ಮನಃಸ್ಥಿತಿ ಬೆಳೆಯಬೇಕಷ್ಟೆ. 4ನೇ ಶತಮಾನದಲ್ಲಿಯೇ ಸಾಕ್ರಟೀಸ್ ತತ್ವಗಳನ್ನು ಒಪ್ಪಿಕೊಳ್ಳದ ಕ್ರೂರ ಮನಸ್ಸುಗಳು ಅವರನ್ನು ವಿಷವಿಕ್ಕಿ ಕೊಂದಿದ್ದನ್ನು ಸ್ಮರಿಸಿದ ಅವರು, ಸಂಶೋಧನೆ ಮತ್ತು ಸಂಶೋಧಕರ ಅಭಿಪ್ರಾಯಗಳಿಗೆ ಕೊನೆ ಇಲ್ಲ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕಲಬುಗಿ ಅವರ ಹತ್ಯೆ ಬಹಳ ಸೂಕ್ಷ್ಮ ವಿಷಯವಾಗಿದ್ದು, ಬುದ್ದಿಜೀವಿಗಳಿಗೆ ಇದು ಕರೆಗಂಟೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಒಟ್ಟಾಗಿ ದನಿ ಎತ್ತಬೇಕು, ಇಲ್ಲವಾದಲ್ಲಿ ಇಂತಹ ಅಮಾನವೀಯ ಕೃತ್ಯವನ್ನು ನಾವು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು. ಈಸಂದರ್ಭದಲ್ಲಿ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com