ಡಾ. ಕಲಬುರ್ಗಿ ಹತ್ಯೆ ವಿಚಾರ: ಸಿಐಡಿ ಅಧಿಕಾರಿಗಳಿಂದ ಇಬ್ಬರ ಗುಪ್ತ ವಿಚಾರಣೆ

ಡಾ.ಎಂ.ಎಂ. ಕಲಬುರ್ಗಿಯವರ ಹತ್ಯೆಯ ವಿಚಾರ ಇದೀಗ ಹೊಸ ತಿರುವು ಪಡೆದಿದ್ದು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ...
ಡಾ. ಕಲಬುರ್ಗಿ
ಡಾ. ಕಲಬುರ್ಗಿ
Updated on

ಬೆಳಗಾವಿ: ಡಾ.ಎಂ.ಎಂ. ಕಲಬುರ್ಗಿಯವರ ಹತ್ಯೆಯ ವಿಚಾರ ಇದೀಗ ಹೊಸ ತಿರುವು ಪಡೆದಿದ್ದು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಹತ್ಯೆ ನಡೆದಿರಬಹುದೇ ಎಂಬ ಶಂಕೆಯಲ್ಲಿ  ಸಿಐಡಿ ಅಧಿಕಾರಿಗಳು ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ಉತ್ತಮವಾಗಿ ಕಟ್ಟಿ ಬೆಳೆಸಿದ್ದರು. ಪ್ರತಿಷ್ಠಾನಕ್ಕೆ ಸರ್ಕಾರ ನೀಡಿದ್ದ ಜಾಗವನ್ನು ವಾಪಸ್ ನೀಡುವಂತೆ ಜಿಲ್ಲಾಡಳಿತ ಸೂಚಿಸಿದ್ದ ಹಿನ್ನೆಲೆಯಲ್ಲಿ ಬೇಸರದಿಂದಲೇ ಆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ರಾಜಿನಾಮೆ ಮತ್ತು ಅದರ ಮುಂದಿನ ಮತ್ತು ಹಿಂದಿನ ಬೆಳವಣಿಗೆಗಳ ಕುರಿತು ಇದೀಗ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಕರ್ನಾಟಕ ಯುವ ವೇದಿಕೆಯ ರಾಜ್ಯಾಧ್ಯಕ್ಷ ಅನಂತಕುಮಾರ ಬ್ಯಾಕೋಡ ಎಂಬುವರನ್ನು ಸಿಐಡಿ ಎಸ್ಪಿ ಡಾ. ರಾಜಪ್ಪ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ನಾಲ್ಕು ಗಂಟೆಗಳ ಕಾಲ ಸುದೀರ್ಘ ವಿಚಾರಣೆಗೊಳಪಡಿಸಿದ್ದು, ಅನಂತಕುಮಾರ ಬ್ಯಾಕೋಡ ಅವರನ್ನು ಧಾರವಾಡಕ್ಕೆ ಕರೆದೊಯ್ದಿದ್ದಾರೆ. ವಿದ್ಯಾವತಿ ಭಜಂತ್ರಿಯನ್ನು ವಿಚಾರಣೆ ಮಾಡಿ ಬಿಡುಗಡೆ ಮಾಡಿದ್ದಾರೆ.

ವಿದ್ಯಾವತಿ ಭಜಂತ್ರಿ ಮತ್ತು ಅನಂತಕುಮಾರ ಬ್ಯಾಕೋಡ ಅವರ ಅಕ್ರಮ ಚಟುವಟಿಕೆ ಹಾಗೂ ಇಲಾಖೆಯಲ್ಲಿನ ಅವ್ಯವಹಾರಗಳನ್ನು ಕಲಬುರ್ಗಿ ಪ್ರಶ್ನಿಸಿದ್ದರು ಎನ್ನಲಾಗಿದ್ದು, ಕಲಬುರ್ಗಿ ಅವರು ಈ ಕುರಿತು ಪತ್ರಕರ್ತ ಶಿವರಾಯ ಏಳಕೋಟಿ ಎಂಬುವರ ಜೊತೆ ದೂರವಾಣಿಯಲ್ಲಿ ಮಾತನಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಧ್ವನಿಸುರಳಿ ಸಹ ಸಿಐಡಿ ಅಧಿಕಾರಿಗಳಿಗೆ ಲಭಿಸಿದೆ.

ನನ್ನ ಕೈವಾಡ ಇಲ್ಲ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ ನನ್ನ ಯಾವುದೇ ಕೈವಾಡ ಇಲ್ಲ. ಕಲಬುರ್ಗಿ ಅವರು ನನ್ನ ತಂದೆಯ ಸಮನಾಗಿದ್ದಾರೆ. ಈ ಸಂಬಂಧ ಸಿಐಡಿಗೆ ಅಗತ್ಯ ಇರುವ ಎಲ್ಲ ಪೂರಕ ದಾಖಲೆಗಳನ್ನು ಒದಗಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ಪಷ್ಟಪಡಿಸಿದ್ದಾರೆ. ಪ್ರಕರಣ ಸಂಬಂಧ ಅನಂತಕುಮಾರ ಬ್ಯಾಕೋಡ ಮೇಲೆ
ಸಂಶಯ ವ್ಯಕ್ತವಾಗಿರುವುದು ನಿಜ. ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ವಾಗಿಲ್ಲ ಎಂದು ಪೊಲೀಸ್ ಆಯುಕ್ತ ಎಸ್. ರವಿ ಹೇಳಿದ್ದಾರೆ.

ಪ್ರಸಾದ್ ಅತ್ತಾವರಗೆ ಮಧ್ಯಂತರ ಜಾಮೀನು
ಸಾಹಿತಿ ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ
ಜಾಲತಾಣದಲ್ಲಿ ಹೇಳಿಕೆ ನೀಡಿ ಬಂಧಿತನಾಗಿದ್ದ ಹಿಂದೂ ಸಂಘಟನೆಯೊಂದರ
ಮುಖಂಡ ಪ್ರಸಾದ್ ಅತ್ತಾವರ್‍ಗೆ 2ನೇ ಜೆಎಂಎಫ್  ನ್ಯಾಯಾಲಯ ಮಧ್ಯಂತರ
ಜಾಮೀನು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com