ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಅಭ್ಯರ್ಥಿಯ ಹೆಸರನ್ನು ನಾಳೆ ಸಂಜೆ ಪ್ರಕಟಿಸುವುದಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಹೇಳಿದ್ದಾರೆ.
ಮೇಯರ್ ಹುದ್ದೆಗಾಗಿ ಕಾಂಗ್ರೆಸ್ ಕಾರ್ಪೊರೇಟರ್ಗಳ ಮತ್ತೆ ತೀವ್ರ ಪೈಪೊಟಿ ಇದ್ದು, ಈ ಕುರಿತು ನಾಳೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಮಲಿಂಗಾ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ನಡುವೆ ಮೇಯರ್ ಹುದ್ದೆಯ ಆಕಾಂಕ್ಷಿಗಳು ತಮ್ಮ ರಾಜಕೀಯ ಗಾಡ್ ಫಾದರ್ಗಳ ಮೂಲಕ ತೀವ್ರ ಲಾಬಿ ನಡೆಸುತ್ತಿದ್ದಾರೆ. ಸದ್ಯ ಮೇಯರ್ ಹುದ್ದೆಗೆ ನಾಲ್ವರು ಕಾಂಗ್ರೆಸ್ ಕಾರ್ಪೊರೇಟರ್ಗಳ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಆ ಪೈಕಿ ರಾಮಲಿಂಗಾ ರೆಡ್ಡಿ ಅವರ ಆಪ್ತ ಮಡಿವಾಳ ವಾರ್ಡ್ನ ಸದಸ್ಯ ಮಂಜುನಾಥ್ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಆದಾಗಿಯೂ ಕೆಲ ಆಕಾಂಕ್ಷಿಗಳು ಇನ್ನೂ ಪ್ರಯತ್ನ ನಡೆಸುತ್ತಿದ್ದು, ಬಿಬಿಎಂಪಿ ಮಾಜಿ ಪ್ರತಿಪಕ್ಷದ ನಾಯಕ ಗುಣಶೇಖರ್, ದತ್ತಾತ್ರೆಯ ದೇವಾಲಯ ವಾರ್ಡ್ನ ಸದಸ್ಯ ನಾರಾಯಣ ಹಾಗೂ ಸಿಎಂ ಅವರ ಆಪ್ತ ಶಿವರಾಜ್ ಅವರು ಮೇಯರ್ ಸ್ಪರ್ಧೆಯಲ್ಲಿದ್ದಾರೆ.
ಇನ್ನು ಉಪಮೇಯರ್ ಸ್ಥಾನಕ್ಕೆ ಶಾಸಕ ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಸೆ.11ರಂದು ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದೆ.
Advertisement